ಚಾಮರಾಜನಗರ: ಶ್ರೀರಾಮ ಸತ್ಯ, ಪ್ರಾಮಾಣಿಕತೆ ಮತ್ತು ನೈತಿಕತೆಯ ದ್ಯೋತಕ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಜಿಲ್ಲಾಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ತಾಲ್ಲೂಕಿನ ಜ್ಯೋತಿಗೌಡನಪುರದ ನಾಯಕರ ಬೀದಿಯಲ್ಲಿ ಬುಧವಾರ ನಡೆದ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶ್ರೀರಾಮ ನಮ್ಮೆಲ್ಲರ ಆರಾಧ್ಯ ದೇವರಾಗಿದ್ದು, ನಾಯಕ ಜನಾಂಗದವರು ರಾಮನ ಭಕ್ತರಾಗಿದ್ದಾರೆ. ಸಮುದಾಯದವರು ಪ್ರತಿ ಗ್ರಾಮದಲ್ಲೂ ಶ್ರೀರಾಮಮಂದಿರ ನಿರ್ಮಿಸಿಕೊಂಡು ಶ್ರೀರಾಮನನ್ನು ಆರಾಧಿಸಿಕೊಂಡು ಬಂದಿದ್ದಾರೆ. ಮರ್ಯಾದೆ ಪುರುಷ ಶ್ರೀರಾಮನ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಆಶಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದರು.
‘ಆದಿಕವಿ ವಾಲ್ಮೀಕಿ ಅವರು ಬರೆದ ರಾಮಾಯಣ ಸರ್ವ ಕಾಲಕ್ಕೂ ಪ್ರಸ್ತುತ. ಸತ್ಯವನ್ನು ವ್ಯಕ್ತಿಗತಗೊಳಿಸಲಾಗಿದೆ. ಶ್ರೀರಾಮ ಎಲ್ಲ ರೀತಿಯಲ್ಲೂ ಆದರ್ಶ ವ್ಯಕ್ತಿಯಾಗಿದ್ದಾರೆ. ರಾಮ ರಾಜ್ಯ ಸ್ಥಾಪನೆಗೆ ಎಲ್ಲರೂ ಶ್ರಮಿಸಬೇಕು. ರಾಮ ಸ್ಮರಣೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜೊತೆಗೆ ವಾಲ್ಮೀಕಿ ಬರೆದ ರಾಮಾಯಣ ಸರ್ವ ಕಾಲ, ಸರ್ವ ವ್ಯಾಪಿಯಾಗಿಸುವ ಮೂಲಕ ಜಗತ್ತಿಗೆ ರಾಮ ಸಂದೇಶವನ್ನು ತಪಿಸುವ ಕೆಲಸ ಮಾಡಬೇಕು’ ಎಂದರು.
ಯಜಮಾನರಾದ ನಂಜುಂಡ ನಾಯಕ, ನಿಂಗನಾಯಕ, ಗುರುಲಿಂಗನಾಯಕ, ರಮೇಶನಾಯಕ, ರಾಮನಾಯಕ, ಹುಚ್ಚನಾಯಕ, ನಾಗನಾಯಕ, ಬಸವಣ್ಣನಾಯಕ, ವೀರಭದ್ರನಾಯಕ, ಮಣಿಕಂಠನಾಯಕ, ಗ್ರಾಮ ಪಂಚಾಯಿತಿ ಸದಸ್ಯರಾದ ಚಿಕ್ಕಣ್ಣನಾಯಕ, ಯಶೋಧಕೃಷ್ಣ ನಾಯಕ, ನಿಂಗ ನಾಯಕ, ಮೀನಾ ವೆಂಕಟೇಶ್, ಕಮಲಮ್ಮ ಸುಬ್ಬನಾಯಕ, ಮುಖಂಡ ವೇಣುಗೋಪಾಲ್ ಹಾಗೂ ಕುಲಸ್ಥರು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.