ADVERTISEMENT

ಗುಂಡ್ಲುಪೇಟೆ: ವಿಜೃಂಭಣೆಯ ಪಾರ್ವತಾಂಭ ರಥೋತ್ಸವ

ಅಪಾರ ಸಂಖ್ಯೆಯ ಭಕ್ತರು ಭಾಗಿ, ಪೂಜೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2024, 16:17 IST
Last Updated 23 ಮೇ 2024, 16:17 IST
ಗುಂಡ್ಲುಪೇಟೆ ತಾಲ್ಲೂಕಿನ ಕಂದೇಗಾಲದ ಪಾರ್ವತಾಂಭ ಬೆಟ್ಟದಲ್ಲಿ ಪಾರ್ವತಾಂಭ ಸಮೇತ ಸೋಮೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು
ಗುಂಡ್ಲುಪೇಟೆ ತಾಲ್ಲೂಕಿನ ಕಂದೇಗಾಲದ ಪಾರ್ವತಾಂಭ ಬೆಟ್ಟದಲ್ಲಿ ಪಾರ್ವತಾಂಭ ಸಮೇತ ಸೋಮೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು   

ಗುಂಡ್ಲುಪೇಟೆ: ತಾಲ್ಲೂಕಿನ ಸ್ಕಂದಗಿರಿ ಕಂದೇಗಾಲದ ಪಾರ್ವತಾಂಭ ಬೆಟ್ಟದಲ್ಲಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಾರ್ವತಾಂಭ ಸಮೇತ ಸೋಮೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯವನ್ನು ತಳಿರು, ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮೇ.21ರಿಂದಲೇ ದೇವಾಲಯದಲ್ಲಿ ನಾಗರಾಜ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಜರುಗಿದವು. ಗಣಪತಿ ಪೂಜೆ, ಶಿವಯಾಗ, ರಥ ಪ್ರತಿಷ್ಠೆ, ರಥ ವಾಸ್ತಬಲಿ, ನವಗ್ರಹ ಪೂಜೆ, ಮಂಟಪೋತ್ಸವ ನಡೆದವು. ಗುರುವಾರ ಬೆಳಿಗ್ಗೆಯಿಂದಲೇ ರಾಜ್ಯದ ನಾನಾ ಕಡೆಗಳಿಂದ ಮತ್ತು ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು.

ಮಧ್ಯಾಹ್ನ ದೇವಾಲಯದಿಂದ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು, ಮಂಗಳವಾದ್ಯ, ಸತ್ತಿಗೆ ಸುರಪಾನಿ ಇತರೆ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ನಂತರ ಪಾರ್ವತಾಂಭ ಸಮೇತ ಸೋಮೇಶ್ವರ ಸ್ವಾಮಿ ಉತ್ಸವ ಮೂರ್ತಿ ಇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಸತೀಶ್ ಮಹಾಮಂಗಳಾರತಿ ನೆರವೇರಿಸಿದರು. ಶಾಸಕ ಎಚ್.ಎಂ.ಗಣೇಶ್‍ಪ್ರಸಾದ್ ಪೂಜೆ ಸಲ್ಲಿಸಿದರು. ನಂತರ ತಹಸೀಲ್ದಾರ್ ಜಿ.ಮಂಜುನಾಥ್ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.

ADVERTISEMENT

ಡಿಎಸ್‍ಪಿ ಲಕ್ಷ್ಮಯ್ಯ ಭೇಟಿ ನೀಡಿದ್ದರು. ಪೊಲೀಸ್ ಇನ್‌ಸ್ಪೆಕ್ಟರ್‌ ಪರಶಿವಮೂರ್ತಿ, ಎಸ್‌ಐ ಸಾಹೇಬಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.