ಕೊಳ್ಳೇಗಾಲ: ದೆಹಲಿಗೆ ತೆರಳುತ್ತಿದ್ದ ರೈತರ ಬಂಧನ ಖಂಡಿಸಿ ತಾಲ್ಲೂಕಿನ ಸತ್ತೇಗಾಲ ಹ್ಯಾಂಡ್ಪೋಸ್ಟ್ನಲ್ಲಿ ರಸ್ತೆ ತಡೆ ನಡೆಸಿದ ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಕೆಲಕಾಲ ರಸ್ತೆಯಲ್ಲಿ ಕುಳಿತ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ರೈತರನ್ನು ಬಿಡುಗಡೆ ಮಾಡಬೇಕು. ಇಲ್ಲವೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಮಲ್ಲು ಉಗನೀಯ ಮಾತನಾಡಿ, ‘ದೇಶದಲ್ಲಿ ಅನ್ನದಾತರಿಗೆ ಅನ್ಯಾಯವಾಗುತ್ತಿದೆ. ಸಂವಿಧಾನದಡಿ ಸೌಮ್ಯವಾಗಿ ನ್ಯಾಯ ಕೇಳಲು ಹಾಗೂ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ಕೈಗೊಂಡಿದ್ದ ರೈತ ಚಳವಳಿ ಹತ್ತಿಕ್ಕಿದಲ್ಲದೆ, ರೈತರನ್ನು ಬಂಧಿಸಲಾಗಿದೆ. ಅದರಲ್ಲಿ, ಕರ್ನಾಟಕದ ಹಲವು ರೈತರಿದ್ದಾರೆ. ಕೂಡಲೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಹೋರಾಟ ಅನಿವಾರ್ಯ’ ಎಂದರು.
ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಚಳವಳಿ ನಡೆದ ಹಿನ್ನಲೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ವಾಹನಗಳು ಸಾಲುಗಟ್ಟಿ ರಸ್ತೆಯಲ್ಲಿ ನಿಲ್ಲಬೇಕಾಯಿತು.
ಈ ಸಂದರ್ಭ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಕಾಯಂ ಸದಸ್ಯ ರವಿನಾಯ್ಡು, ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ಪೆರೆಯಾ, ರೈತ ಮುಖಂಡರಾದ ಮೋಳೆ ಶಿವರಾಮ್, ಶಿವಕುಮಾರ್, ಜಯರಾಜ್, ಚಾರ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.