ಚಾಮರಾಜನಗರ/ಕೊಳ್ಳೇಗಾಲ: ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಕೆಲವು ಖಾಸಗಿ ಶಾಲೆಗಳ ಆರಂಭೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಬೇಸಿಗೆ ರಜೆ ಮುಗಿಸಿ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳನ್ನು ಶಿಕ್ಷಕರು ಪ್ರೀತಿಯಿಂದ ಬರಮಾಡಿಕೊಂಡರು. ಆದರೆ, ಮೊದಲ ದಿನ ಮಕ್ಕಳ ಹಾಜರಾತಿ ಕಡಿಮೆ ಇತ್ತು.
ಉತ್ಸಾಹದಿಂದ ಶಾಲೆಗೆ ಬಂದ ಮಕ್ಕಳನ್ನು ಚಾಕೊಲೆಟ್, ಸಿಹಿ, ಹೂವು ನೀಡಿ, ಪುಷ್ಪ ವೃಷ್ಟಿ ಮಾಡಿ ಶಿಕ್ಷಕರು ಸ್ವಾಗತಿಸಿದರು. ಮೊದಲ ದಿನವೇ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಪಠ್ಯಪುಸ್ತಕಗಳನ್ನೂ ವಿತರಿಸಲಾಯಿತು. ಮಧ್ಯಾಹ್ನ ಬಿಸಿಯೂಟದೊಂದಿಗೆ ಸಿಹಿಯನ್ನೂ ನೀಡಲಾಯಿತು. ಬಹುತೇಕ ಕಡೆಗಳಲ್ಲಿ ಪಾಯಸ ಮಾಡಿದರೆ, ಇನ್ನೂ ಕೆಲವು ಕಡೆಗಳಲ್ಲಿ ಕೇಸರಿಬಾತ್ ಮಾಡಿ ಮಕ್ಕಳಿಗೆ ಬಡಿಸಲಾಯಿತು.
ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಸೇರಿದಂತೆ ಕೆಲವು ಶಾಲೆಗಳಲ್ಲಿ ಎಸ್ಡಿಎಂಸಿ ಸದಸ್ಯರು ಆಸಕ್ತಿ ವಹಿಸಿ ವಿಶೇಷ ಅಡುಗೆ ಸಿದ್ಧಪಡಿಸಿದ್ದರು.
ಚಾಮರಾಜನಗರ ತಾಲ್ಲೂಕಿನ ಉಡಿಗಾಲ, ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಗ್ರಾಮಸ್ಥರು ಮಕ್ಕಳನ್ನು ಅಲಂಕೃತ ಎತ್ತಿನ ಬಂಡಿ, ಆಟೊದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಶಾಲೆಗೆ ಕರೆದುಕೊಂಡು ಬಂದರು. ಕೆಲವು ಕಡೆಗಳಲ್ಲಿ ಬ್ಯಾಂಡ್ ಸೆಟ್ ಅಬ್ಬರದೊಂದಿಗೆ ಮೆರವಣಿಗೆಯೂ ನಡೆಯಿತು.
ಸಂತೇಮರಹಳ್ಳಿ ಹೋಬಳಿ ಸಮೀಪದ ಹುರುಳಿ ಕೆಬ್ಬೆಮೋಳೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಶೃಂಗರಿಸಿದ್ದ ಆಟೊ ರಿಕ್ಷಾದಲ್ಲಿ ಮನೆ ಮನೆಗಳಿಗೆ ತೆರಳಿ ಮಕ್ಕಳನ್ನು ರಿಕ್ಷಾದಲ್ಲಿ ಕರೆತಂದರು. ಮಧ್ಯಾಹ್ನ ಶಾಲೆಯಲ್ಲಿ ಹೋಳಿಗೆ ಊಟವನ್ನು ಮಕ್ಕಳಿಗೆ ಬಡಿಸಲಾಯಿತು.
ಶಾಲೆಗಳಿಗೆ ಅಲಂಕಾರ: ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಗಳನ್ನು ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಕೆಲವು ಶಾಲೆಗಳ ಪ್ರವೇಶ ದ್ವಾರವನ್ನು ಬಲೂನುಗಳಿಂದ ಸಿಂಗರಿಸಲಾಗಿತ್ತು.
ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಅಗ್ರಹಾರ ಶಾಲೆಯಲ್ಲಿ ಶಿಕ್ಷಕಿ ಸರೋಜಮ್ಮ ಅವರು 1ನೇ ತರಗತಿಗೆ ಸೇರಿದ 22 ಮಕ್ಕಳಿಗೆ ಶಾಲಾ ಬ್ಯಾಗ್ಗಳನ್ನು ಕೊಡುಗೆಯಾಗಿ ನೀಡಿದರು.
ಅಧಿಕಾರಿಗಳಿಂದ ಸ್ವಾಗತ: ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಚಂದಕವಾಡಿ ಪಬ್ಲಿಕ್ ಶಾಲೆ, ನಾಗವಳ್ಳಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು ಸ್ವಾಗತಿಸಿದರು. ನಾಗವಳ್ಳಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸಿದರು.
ದಾಖಲಾತಿ ಆಂದೋಲನ: ಇದೇ ಸಂದರ್ಭದಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಆಂದೋಲನ ನಡೆಯಿತು. ಆಂದೋಲನದ ಅಂಗವಾಗಿ ಗ್ರಾಮಗಳಲ್ಲಿ ಜಾಥಾ ನಡೆಯಿತು.
ಹಾಜರಾತಿ ಕಡಿಮೆ: ಮೊದಲ ದಿನ ಶಾಲೆಗಳಿಗೆ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಬಂದಿದ್ದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶೇ 50ರಷ್ಟು ಮಕ್ಕಳು ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಎಲ್ಲ ಶಾಲೆಗಳಲ್ಲಿ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಎರಡು ಜೊತೆ ಸಮವಸ್ತ್ರ ಪಠ್ಯಪುಸ್ತಕಗಳನ್ನೂ ವಿತರಿಸಿದ್ದೇವೆ ರಾಮಚಂದ್ರ ರಾಜೇ ಅರಸ್ ಡಿಡಿಪಿಐ
ಜಿಲ್ಲೆಯಲ್ಲಿ ಶೇ 50ರಷ್ಟು ಹಾಜರಾತಿ ಶಿಕ್ಷಕಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗು ಕೊಡುಗೆ ಬ್ಯಾಂಡ್ ಸೆಟ್ ಜೊತೆ ಅಬ್ಬರದ ಮೆರವಣಿಗೆ
ಎಲ್ಲ ಶಾಲೆಗಳಲ್ಲಿ ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಎರಡು ಜೊತೆ ಸಮವಸ್ತ್ರ ಪಠ್ಯಪುಸ್ತಕಗಳನ್ನೂ ವಿತರಿಸಿದ್ದೇವೆರಾಮಚಂದ್ರ ರಾಜೇ ಅರಸ್ ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.