ಚಾಮರಾಜನಗರ: ನಗರದಲ್ಲಿ ಒಂದೇ ದಿನ ಮೂರು ವಾಣಿಜ್ಯ ಮಳಿಗೆಗಳಲ್ಲಿ ಕಳವು ನಡೆದಿದ್ದು ಸ್ಥಳೀಯ ವ್ಯಾಪಾರಿಗಳಲ್ಲಿ ಭೀತಿ ಹುಟ್ಟಿಸಿದೆ. ಭುವನೇಶ್ವರಿ ವೃತ್ತದ ಬಳಿ ಇರುವ ಸ್ವಾಗತ್ ಟ್ರೇಡರ್ಸ್, ಪ್ರಭು ಎಲೆಕ್ಟ್ರಿಕಲ್ಸ್, ವಿನಯ್ ಮೋಟರ್ಸ್ನಲ್ಲಿ ಕಳ್ಳತನ ನಡೆದಿದೆ.
ಸ್ವಾಗತ್ ಟ್ರೇಡರ್ಸ್ನ ಕಿಟಕಿಯ ಗಾಜು ಒಡೆದು ವಾಷ್ರೂಂ ಮೂಲಕ ಒಳಪ್ರವೇಶಿಸಿ ಕ್ಯಾಷ್ ಕೌಂಟರ್ನಲ್ಲಿದ್ದ 20 ರಿಂದ 30 ಸಾವಿರ ನಗದು ದೋಚಲಾಗಿದೆ. ಪ್ರಭು ಎಲೆಕ್ಟ್ರಿಕಲ್ ಹಾಗೂ ವಿನಯ್ ಮೋಟರ್ಸ್ನಲ್ಲೂ ಕ್ಯಾಷ್ ಕೌಂಟರ್ನಲ್ಲಿದ್ದ ನಗದು ಕಳವು ಮಾಡಲಾಗಿದೆ.
ಡಿವಿಆರ್ ಹೊತ್ತೊಯ್ದ ಕಳ್ಳರು: ಪೊಲೀಸರಿಗೆ ಕಳ್ಳತನದ ಸಾಕ್ಷ್ಯ ಸಿಗಬಾರದು ಎಂಬ ಉದ್ದೇಶದಿಂದ ಕಳವು ನಡೆದ ಮೂರು ಮಳಿಗೆಗಳ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ಗಳನ್ನು ಹೊತ್ತೊಯ್ಯಲಾಗಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿನೀಡಿ ಪರಿಶೀಲಿಸಿದ್ದಾರೆ.
ಕೊಳ್ಳೇಗಾಲ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಇದೇ ಮಾದರಿಯಲ್ಲಿ ಕಳವು ನಡೆದಿರುವ ಮಾಹಿತಿ ಲಭ್ಯವಾಗಿದ್ದು ಶೀಘ್ರ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪತ್ರದ ಮೂಲಕ ಬೆದರಿಕೆ: ‘ಅಂಗಡಿ ಮಳಿಗೆಗಳಿಗೆ ಹಾಕಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದುಹಾಕುವಂತೆ ನಗರದ ಮೂವರು ವ್ಯಾಪಾರಿಗಳಿಗೆ ಬೆದರಿಕೆ ಪತ್ರ ಬರೆಯಲಾಗಿದೆ. ಅಂಗಡಿ ಬೀದಿಯಲ್ಲಿರುವ ಎಂ.ಕೆ.ಸುಬ್ರಹ್ಮಣ್ಯ, ಎಂ.ಕೆ.ಶ್ರೀನಿವಾಸ್, ವಾಸುಕಿ ಸುಬ್ರಹ್ಮಣ್ಯ ಅವರಿಗೆ ಬರೆದಿರುವ ಪತ್ರದಲ್ಲಿ ‘ತಕ್ಷಣ ನಿಮ್ಮ ಅಂಗಡಿಯ ಹೊರಭಾಗದಲ್ಲಿ ಹಾಕಿರುವ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಬೇಕು, ತೆಗೆಯದಿದ್ದರೆ ಯಾವ ರೂಪದಲ್ಲಾದರೂ ಕೆಡಕು ಮಾಡಲು ನಮ್ಮ ಸಂಘ ಸದಾ ಕಾರ್ಯಪ್ರವೃತ್ತವಾಗಿರಲಿದೆ. ಉದಾಸೀನ ಮಾಡಿದರೆ ಅಥವಾ ಕಾನೂನು ಮೊರೆಹೋದರೆ ಪರಿಣಾಮ ಭೀಕರವಾಗಿರಲಿದೆ’ ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.