ಚೇಳೂರು: ವ್ಯವಸಾಯ ಎಂದರೇನೆ, ‘ಸಾಕಪ್ಪ, ಬರೀ ಸಾಲ ಮಾಡಿ ಕಷ್ಟಪಟ್ಟರೂ ಪ್ರಯೋಜನವಾಗದೇ ನಷ್ಟವನ್ನೇ ನೆಚ್ಚಿಕೊಳ್ಳಬೇಕು’ ಎನ್ನುವವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ರೈತರೊಬ್ಬರು ಲಾಭ ಗಳಿಸುತ್ತಿದ್ದಾರೆ.
ನಾರೆಮದ್ದೆಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೊಡ್ಡಿವಾರಪಲ್ಲಿ ಗ್ರಾಮದ ಬಳಿ ಪ್ರಕಾಶ್ ಎಂಬವರ ಜಮೀನಿನಲ್ಲಿ ರೈತ ಈರಪ್ಪ ಐದು ಎಕರೆ ಟೊಮೆಟೊ ಬೆಳೆದು ಲಾಭದ ನಿರೀಕ್ಷೆಯಲ್ಲಿ ಇದ್ದಾರೆ.
ಟೊಮೆಟೊ ಬೆಲೆ ಏರಿಕೆ ಕಂಡಿರುವುದರಿಂದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಾರುಕಟ್ಟೆಯಲ್ಲಿ 15 ಕೆ.ಜಿ ತೂಕದ ಟೊಮೆಟೊ ಬಾಕ್ಸ್ ₹800ರಂದ ₹1,500ಕ್ಕೆ ಮಾರಾಟವಾಗುತ್ತಿದೆ. ಇದರಿಂದ ಉತ್ತೇಜಿತರಾಗಿರುವ ರೈತರು ಟೊಮೆಟೊ ಬೆಳೆಯಲು ಮುಂದಾಗಿದ್ದಾರೆ.
ಸಾವಯವ ಗೊಬ್ಬರ ಬಳಕೆ: ಬಿತ್ತನೆಗೆ ಮುನ್ನ, ಜಮೀನಿಗೆ ತಿಪ್ಪೆಗೊಬ್ಬರ ಬಳಸುತ್ತೇನೆ. ನಂತರ ಭೂಮಿಯ ಫಲವತ್ತತೆ ಕಾಪಾಡಿಕೊಂಡು ಯೋಜನಾಬದ್ಧವಾಗಿ ಕೃಷಿ ಮಾಡುತ್ತೇನೆ. ಅತಿಯಾದ ರಾಸಾಯನಿಕ ಬಳಕೆಯಿಂದ ದೂರ ಉಳಿದಿದ್ದೇನೆ. ತರಕಾರಿ ಬೆಳೆಗಳು ಕೀಟಬಾಧೆಗೆ ತುತ್ತಾಗದಂತೆ, ಎರಡು ಬಾರಿ ಕೀಟನಾಶಕ ಸಿಂಪಡಿಸುತ್ತೇನೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಇಳುವರಿ ಪ್ರಮಾಣ ಹೆಚ್ಚುತ್ತಿದೆ ಎಂದು ರೈತ ಈರಪ್ಪ ತಿಳಿಸಿದರು.
ಪಕ್ಕದ ಗ್ರಾಮಗಳಿಗೆ ಕೂಲಿ ಕೆಲಸ ಹುಡುಕುತ್ತಾ ಹೋಗುವುದು ತಪ್ಪಿದೆ. ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದವರು 25 ಮತ್ತು 30 ಕೂಲಿಯಾಳುಗಳಿಗೆ ರೈತ ಈರಪ್ಪ ಕೆಲಸ ನೀಡುತ್ತಾರೆ ಎಂದು ಕಾರ್ಮಿಕ ನಾಗರಾಜ ತಿಳಿಸಿದರು.
ಸಮಗ್ರ ಬೇಸಾಯ ಪಾಲನೆ
ಒಂದೇ ಬೆಳೆ ನೆಚ್ಚಿಕೊಂಡರೆ ಕುಳಿತರೆ, ಕೃಷಿ ಕಾಯಕದಲ್ಲಿ ಲಾಭ ಕಷ್ಟ. ಸಮಗ್ರ ಬೇಸಾಯ ಮಾಡಿದರೆ, ಒಂದಿಲ್ಲೊಂದು ಬೆಳೆ ಕೈಹಿಡಿದೇ ಹಿಡಿಯುತ್ತದೆ. ಉತ್ತಮ ಆದಾಯ ಖಾತ್ರಿಯಾಗುತ್ತದೆ. ನಷ್ಟಕ್ಕೀಡಾಗುವುದು ತಪ್ಪುತ್ತದೆ. ಹಾಗಾಗಿ ವರ್ಷದಲ್ಲಿ ಯಾವ ತಿಂಗಳಿನಲ್ಲಿ ಯಾವ ತರಕಾರಿಗೆ ಬೇಡಿಕೆ ಇದೆ ಎಂದು ಸಮೀಕ್ಷೆ ಮಾಡಿ ಹವಾಮಾನ ಮತ್ತು ಮಾರುಕಟ್ಟೆ ಬೇಡಿಕೆ ಆಧರಿಸಿ, ವಿವಿಧ ಬೆಳೆಗಳನ್ನು ನಿಯಮಿತವಾಗಿ ಬೆಳೆಯುತ್ತಿದ್ದೇನೆ ಎನ್ನುತ್ತಾರೆ ರೈತ ಈರಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.