ADVERTISEMENT

ಚಿಂತಾಮಣಿಯ ವೆಂಕಟರಮಣಸ್ವಾಮಿ ದೇವಾಲಯ: 2ನೇ ಶನಿವಾರ ದೇಗುಲಕ್ಕೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2021, 5:57 IST
Last Updated 22 ಆಗಸ್ಟ್ 2021, 5:57 IST
ಚಿಂತಾಮಣಿಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ2ನೇ ಶನಿವಾರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಚಿಂತಾಮಣಿಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ2ನೇ ಶನಿವಾರ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು   

ಚಿಂತಾಮಣಿ: ಶ್ರಾವಣಮಾಸದ ಎರಡನೇ ಶನಿವಾರದ ಅಂಗವಾಗಿ ನಗರ ಹಾಗೂ ತಾಲ್ಲೂಕಿನ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರಿದವು.

ತಾಲ್ಲೂಕಿನ ಬಹುತೇಕ ಎಲ್ಲ ದೇವಾಲಯಗಳಲ್ಲೂ ಜನಜಂಗುಳಿ ಕಂಡುಬಂತು. ಕೊರೊನಾ ಮರೆತು ಜನರು ದಂಡು ದಂಡಾಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ದಾಂಗುಡಿ ಇಡುತ್ತಿದ್ದರು.

ತಾಲ್ಲೂಕಿನ ಚಿಲಕಲನೇರ್ಪು ಹೋಬಳಿಯ ಏನಿಗದಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಕುಂಠಪುರದ ಶ್ರೀಹರಿಕ್ಷೇತ್ರದಲ್ಲಿ ವೆಂಕಟರಮಣಸ್ವಾಮಿಗೆ ಮಾಡಿದ್ದ ವಿಶೇಷ ಅಲಂಕಾರ ಭಕ್ತರ ಗಮನಸೆಳೆಯುತ್ತಿತ್ತು. ಸ್ವಾಮಿಗೆ ಅಭಿಷೇಕ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು.

ADVERTISEMENT

ನಗರದ ನೆಕ್ಕುಂದಿಯಲ್ಲಿ ನೆಲೆಸಿರುವ ಶ್ರೀನಿವಾಸ ದೇವಾಲಯದಲ್ಲಿ ವೆಂಕಟರಮಣಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ ಮತ್ತಿತರ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಬೆಳಿಗ್ಗೆಯಿಂದ ಸಂಜೆಯವರೆಗೂ ನಗರದ ಜನರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ಮುಖಂಡರಾದ ಕೆ.ಟಿ.ಪ್ರಕಾಶ್, ಎಸ್.ಜಿ.ಶ್ರೀನಿವಾಸ್, ವಿ.ಎಲ್.ಕೃಷ್ಣಸ್ವಾಮಿ, ಪ್ರಭು ಇದ್ದರು.

ಕೈವಾರ: ಪ್ರಸಿದ್ಧ ಯಾತ್ರಾಸ್ಥಳ ಕೈವಾರದಲ್ಲೂ ಎರಡನೇ ಶನಿವಾರದಂದು ದೇವಾಲಯಗಳಿಗೆ ಭಕ್ತರು ಎಲ್ಲ ದೇವಾಲಯಗಳಿಗೆ ಎಡತಾಕುತ್ತಿದ್ದರು. ಯೋಗಿನಾರೇಯಣ ಮಠ, ಅಮರನಾರೇಯಣ ದೇವಸ್ಥಾನ, ಭೀಮಲಿಂಗೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಮಹಾಮಂಗಳಾರತಿ ನಡೆದವು.

ಮಹಾಕೈಲಾಸಗಿರಿ, ಆಲಂಬಗಿರಿಯ ಲಕ್ಷ್ಮೀವೆಂಕಟರಮಣ ದೇವಾಲಯ, ಬೂರಗಮಾಕಲಹಳ್ಳಿಯ ವೀರಾಂಜನೇಯ ದೇವಾಲಯ, ಮುರುಗಮಲ್ಲದ ಮುಕ್ತೀಶ್ವರ ದೇವಾಲಯ, ಕುರುಟಹಳ್ಳಿಯ ವೀರಾಂಜನೇಯ ದೇವಾಲಯ, ನಗರದ ಕನಂಪಲ್ಲಿಯ ಪಂಚಮುಖಿ ಆಂಜನೇಯ, ನಾಗನಾಥೇಶ್ವರ, ಅಜಾದ್‌ಚೌಕದ ಹರಿಹರೇಶ್ವರ, ಬೆಂಗಳೂರು ರಸ್ತೆಯ ಶನಿಮಹಾತ್ಮ ದೇವಾಲಯಗಳಲ್ಲೂ ಶ್ರಾವಣ ಮಾಸದ ವಿಶೇಷ ಅಲಂಕಾರ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.