ADVERTISEMENT

ಬಾಗೇಪಲ್ಲಿ | ಶೇಂಗಾ ಬೆಳೆ ನಷ್ಟ: ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 13:34 IST
Last Updated 27 ನವೆಂಬರ್ 2023, 13:34 IST
ಬಾಗೇಪಲ್ಲಿ ತಾಲ್ಲೂಕಿನ ಕಸಬಾ ಹೋಬಳಿಯ ಚಿನ್ನೇಪಲ್ಲಿ ಗ್ರಾಮದ ಬಳಿ ರೈತ ನರಸಿಂಹಪ್ಪ, ರೈತ ಮಹಿಳೆ ನರಸಮ್ಮ ಬೆಳೆದಿರುವ ಶೇಂಗಾ ಬೆಳೆ ಉತ್ತಮ ಇಳುವರಿ ಬಾರದೇ ಕೊಳೆತಿರುವುದು
ಬಾಗೇಪಲ್ಲಿ ತಾಲ್ಲೂಕಿನ ಕಸಬಾ ಹೋಬಳಿಯ ಚಿನ್ನೇಪಲ್ಲಿ ಗ್ರಾಮದ ಬಳಿ ರೈತ ನರಸಿಂಹಪ್ಪ, ರೈತ ಮಹಿಳೆ ನರಸಮ್ಮ ಬೆಳೆದಿರುವ ಶೇಂಗಾ ಬೆಳೆ ಉತ್ತಮ ಇಳುವರಿ ಬಾರದೇ ಕೊಳೆತಿರುವುದು   

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಸಕಾಲದಲ್ಲಿ ಮಳೆ ಆಗದೇ ರೈತ ನರಸಿಂಹಪ್ಪ, ನರಸಮ್ಮ ಬೆಳೆದಿರುವ ಶೇಂಗಾ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದ್ದು, ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತ ಕುಟುಂಬ ಇದೀಗ ಕಣ್ಣೀರು ಹಾಕುವಂತಾಗಿದೆ.

ತಾಲ್ಲೂಕಿನಲ್ಲಿ ಯಾವುದೇ ನದಿ ನಾಲೆ ಇಲ್ಲ. ಕಳೆದ 5 ತಿಂಗಳಿಂದ ತಾಲ್ಲೂಕಿನಲ್ಲಿ ಹಿಂಗಾರು, ಮುಂಗಾರು ಮಳೆ ಆಗಿಲ್ಲ.

ತಾಲ್ಲೂಕಿನ ಕಸಬಾ ಹೋಬಳಿಯ ಚಿನ್ನೇಪಲ್ಲಿ ಗ್ರಾಮದ ರೈತ ನರಸಿಂಹಪ್ಪ, ನರಸಮ್ಮ 3 ಎಕರೆ ಪ್ರದೇಶದಲ್ಲಿ ಒಂದು ಕ್ವಿಂಟಲ್ ಶೇಂಗಾ ಬೀಜ ಬಿತ್ತನೆ ಮಾಡಿದ್ದರು. ಕಾಯಿ ಮೊಳಕೆ ಒಡೆದಿಲ್ಲ. ಹಾಕಿದ ಬಂಡವಾಳದಲ್ಲಿ ಬಿಡಿಗಾಸು ರೈತರಿಗೆ ಸಿಗುತ್ತಿಲ್ಲ. ಬೆಳೆಯು ಉತ್ತಮ ಇಳುವರಿ ಬಂದಿಲ್ಲ. ಬೆಳೆ ನಷ್ಟವಾಗಿದ್ದು ಸರ್ಕಾರ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ಸರ್ಕಾರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದೆ. ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ಬೆಳೆ ನಷ್ಟ ಆಗಿದೆ. ಕೃಷಿ ಹಾಗೂ ತೋಟಗಾರಿಕೆ, ಕಂದಾಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ಮಾಡಿ, ಬೆಳೆ ನಷ್ಟದ ಮಾಹಿತಿಯನ್ನು ಸರ್ಕಾರಕ್ಕೆ ವರದಿ ನೀಡಬೇಕು. ಕೂಡಲೇ ರೈತರಿಗೆ ಬೆಳೆ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪುಟ್ಟಣ್ಣಯ್ಯ ಬಣದ ರಾಜ್ಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ಅನಸೂಯಮ್ಮ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.