ADVERTISEMENT

ಶಿಡ್ಲಘಟ್ಟ | ದಿಢೀರ್ ದಾಳಿ: ಕ್ಲಿನಿಕ್‌ಗೆ ಬೀಗ ಜಡಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 14:13 IST
Last Updated 17 ಡಿಸೆಂಬರ್ 2023, 14:13 IST
ಶಿಡ್ಲಘಟ್ಟ ನಗರದಲ್ಲಿನ ಖಾಸಗಿ ಕ್ಲಿನಿಕ್‌ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು
ಶಿಡ್ಲಘಟ್ಟ ನಗರದಲ್ಲಿನ ಖಾಸಗಿ ಕ್ಲಿನಿಕ್‌ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು   

ಶಿಡ್ಲಘಟ್ಟ: ನಗರದಲ್ಲಿನ ಖಾಸಗಿ ಕ್ಲಿನಿಕ್‌ವೊಂದರ ಮೇಲೆ ಶನಿವಾರ ರಾತ್ರಿ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳ ತಂಡಕ್ಕೆ ಕ್ಲಿನಿಕ್‌ನಲ್ಲಿ ಆಯುಷ್ ವೈದ್ಯೆಯೊಬ್ಬರು ಆಲೋಪಥಿಕ್ ಚಿಕಿತ್ಸೆ ನೀಡುತ್ತಿದ್ದದ್ದು ಕಂಡು ಬಂದಿದ್ದು ಕ್ಲಿನಿಕ್‌ಗೆ ಬೀಗ ಜಡಿದು ಸಿಬ್ಬಂದಿಗೆ ನೋಟಿಸ್ ನೀಡಿದ್ದಾರೆ.

ರೇಷ್ಮೆಗೂಡು ಮಾರುಕಟ್ಟೆ ಹಿಂಭಾಗದ ಆನಂದ್ ಕ್ಲಿನಿಕ್‌ಗೆ ಶನಿವಾರ ರಾತ್ರಿ ದಾಳಿ ನಡೆಸಲಾಗಿದೆ. ಕ್ಲಿನಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಯುಷ್ ವೈದ್ಯೆ ಸರಸ್ವತಿ ಅವರು ಆಲೋಪಥಿಕ್ ಪದ್ಧತಿಯ ಚಿಕಿತ್ಸೆ ನೀಡುತ್ತಿದ್ದದ್ದು ಕಂಡು ಬಂದಿದೆ. ಆಯುಷ್ ವೈದ್ಯೆ ಹಾಗೂ ಸ್ಟಾಫ್ ನರ್ಸ್ ಸುಧಾ ಅವರಿಂದ ಹೇಳಿಕೆ ಪಡೆದು ನೋಟಿಸ್ ನೀಡಲಾಗಿದೆ.

ಸರ್ಕಾರಿ ವೈದ್ಯರಾಗಿ ನಿವೃತ್ತರಾದ ಡಾ.ಆನಂದ್ ಅವರು ಈ ಹಿಂದೆ ಈ ಕ್ಲಿನಿಕ್‌ ನಡೆಸುತ್ತಿದ್ದರು. ಇವರ ಹೆಸರಲ್ಲೇ ಕ್ಲಿನಿಕ್ ನೋಂದಣಿ ಆಗಿದ್ದು ಅಲ್ಲಿ ಆಯುಷ್ ವೈದ್ಯೆ ಸರಸ್ವತಿ, ಸ್ಟಾಫ್ ನರ್ಸ್ ಸುಧಾ ಕಾರ್ಯನಿರ್ವಹಿಸುತ್ತಿದ್ದರು.

ADVERTISEMENT

ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ಮೇಲಿನ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ದಾಳಿಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಈ ಕ್ಲಿನಿಕ್‌ನಲ್ಲಿ ವೈದ್ಯಕೀಯ ಚಿಕಿತ್ಸಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಬಗ್ಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು.

ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇ.ಒ ಜಿ.ಮುನಿರಾಜ, ಸಿಪಿಐ ಎಂ.ಶ್ರೀನಿವಾಸ್, ನಗರಠಾಣೆಯ ಎಸ್‌.ಐ ವೇಣುಗೋಪಾಲ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.