ಶಿಡ್ಲಘಟ್ಟ: ‘ಮಾನವ ಕಳ್ಳಸಾಗಾಣಿಕೆ ಬಗ್ಗೆ ಎಲ್ಲರಲ್ಲೂ ಮೊದಲು ಅರಿವು ಮೂಡಿಸಬೇಕು’ ಎಂದು ಜಂಗಮಕೋಟೆ ಬಾಲಾಜಿ ವಿದ್ಯಾನಿಕೇತನದ ಅಧ್ಯಕ್ಷ ಆರ್.ಮುನಿರಾಜು ಹೇಳಿದರು.
ಜಂಗಮಕೋಟೆಯ ಬಾಲಾಜಿ ವಿದ್ಯಾನಿಕೇತನದಲ್ಲಿ ಮುಂಬೈ ನಗರದ ದಿ ಮೂಮೆಂಟ್ ಇಂಡಿಯಾ, ಕರ್ನಾಟಕ ವಲಯ ರಾಜ್ಯ ರಾಷ್ಟ್ರೀಯ ಯುವ ಯೋಜನೆ ಮತ್ತು ಆಂಧ್ರಪ್ರದೇಶದ ಮದನಪಲ್ಲಿಯ ಗ್ರಾಮ ಜ್ಯೋತಿ ಸೊಸೈಟಿ ಸಹಯೋಗದೊಂದಿಗೆ ಮಾನವ ಕಳ್ಳಸಾಗಾಣಿಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಮೌನ ಮೆರವಣಿಗೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
‘ಇಂದು ನವಜಾತ ಶಿಶುವಿನಿಂದ ಹಿಡಿದು ವೃದ್ಧರವರೆಗೆ ಜನರು ಈ ಮಾನವ ಕಳ್ಳಸಾಗಣೆಗೆ ಒಳಗಾಗುತ್ತಿದ್ದಾರೆ. ಮಕ್ಕಳನ್ನು ಬಲವಂತದ ದುಡಿಮೆಗೆ ಒಳಪಡಿಸಲಾಗುತ್ತದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜವನ್ನು ಮಾನವ ಕಳ್ಳಸಾಗಾಣಿಕೆಯಿಂದ ಮುಕ್ತ ಮಾಡುವಲ್ಲಿ ಒಟ್ಟಾಗಿ ಕೆಲಸ ಮಾಡೋಣ’ ಎಂದು ಹೇಳಿದರು.
ಬಾಲಾಜಿ ವಿದ್ಯಾನಿಕೇತನದ ಆಡಳಿತಾಧಿಕಾರಿ ಪ್ರಭಪ್ರಶಾಂತ್ ಮಾತನಾಡಿ, ‘ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹಾಗೂ ಎಲ್ಲಾದರೂ ಮಾನವಕಳ್ಳಸಾಗಾಣಿಕೆ ಬಗ್ಗೆ ಮಾಹಿತಿ ತಮಗೆ ದೊರೆತರೆ ಆ ಕೂಡಲೇ 1098 ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಿ’ ಎಂದರು.
ರಾಜ್ಯ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ ಮಾತನಾಡಿ, ‘ಮನುಷ್ಯ ಮನುಷ್ಯನಾಗಿ ಕಾಣದೆ ಮಾರಾಟದ ವಸ್ತುವಾಗಿ ಕಾಣುತ್ತಿರುವುದು ದುರಂತ’ ಎಂದರು.
ಬಾಲಾಜಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಮಾಲ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಹರೀಶ್, ಸಹಶಿಕ್ಷಕಿ ಪುಷ್ಪ, ರಾಜ್ಯ ಮಡಿವಾಳರ ಸಂಘದ ರಾಜ್ಯ ನಿರ್ದೇಶಕ ಬಿಜ್ಜವಾರ ಬಿ.ಕೆ.ಮಧು, ಆರ್.ಬಿ.ಮುನೇಗೌಡ, ಡಿ.ಯಶ್ವಂತ್, ಪಿ.ನಂದನ್, ಎಂ.ನಿತಿನ್, ಎಚ್.ವಿ.ಲಿಖಿತ್ ಕುಮಾರ್, ಎಚ್.ಆರ್. ನಿತಿನ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.