ADVERTISEMENT

ಶಿಡ್ಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿ

ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ

ಡಿ.ಜಿ.ಮಲ್ಲಿಕಾರ್ಜುನ
Published 14 ಆಗಸ್ಟ್ 2024, 6:57 IST
Last Updated 14 ಆಗಸ್ಟ್ 2024, 6:57 IST
<div class="paragraphs"><p>ಶಿಡ್ಲಘಟ್ಟ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರು</p></div>

ಶಿಡ್ಲಘಟ್ಟ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರು

   

ಶಿಡ್ಲಘಟ್ಟ: ದೇಶಭಕ್ತರಾಗಿ ಚಳವಳಿ, ಸತ್ಯಾಗ್ರಹಗಳ ಮೂಲಕ ಮಾತ್ರವಲ್ಲದೆ ಬಲಿದಾನದ ಮೂಲಕ ಹುತಾತ್ಮರಾದ ಶಿಡ್ಲಘಟ್ಟ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರು ಸ್ಮರಣೀಯರು.

1936ರ ಮೇ 31ರಂದು ಗಾಂಧೀಜಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದರು. ಹರಿಜನೋದ್ಧಾರ ನಿಧಿ ಸಂಗ್ರಹಣೆಗಾಗಿ ಆಗಮಿಸಿದ್ದ ಅವರು, ಸ್ವತಂತ್ರ ಭಾರತದ ಕಿಚ್ಚನ್ನು ಹೊತ್ತಿಸಿದ್ದರು. ಗಾಂಧೀಜಿ ಪ್ರೇರಣೆಯಿಂದ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 1938ರಿಂದಲೇ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ತಿಳಿದುಬರುತ್ತದೆ.

ADVERTISEMENT

1938ರ ಏಪ್ರಿಲ್ ಮೊದಲ ವಾರದಲ್ಲಿ ಮೈಸೂರು ಕಾಂಗ್ರೆಸ್ ಪ್ರಥಮ ಅಧಿವೇಶನದಲ್ಲಿ ಭಾಗವಹಿಸಲು ಮದ್ದೂರು ತಾಲ್ಲೂಕು, ಶಿವಪುರಕ್ಕೆ ಮಳ್ಳೂರಿನ ಜಿ.ಪಾಪಣ್ಣ ಅವರು ತಮ್ಮ ಯುವ ಪಡೆಯೊಂದಿಗೆ ಹೋಗಿದ್ದರು. ಧ್ವಜಾರೋಹಣದ ಹಿಂದಿನ ದಿನ ಸಂಜೆಯೇ ಧ್ವಜಾರೋಹಣ ನಿಷೇಧಿಸಿ ಪ್ರತಿಬಂಧಕಾಜ್ಞೆಯನ್ನು ಬ್ರಿಟಿಷರು ಎಲ್ಲ ಮುಖಂಡರ ಮೇಲೂ ಜಾರಿ ಮಾಡಿದ್ದರು. ಮಾರನೆಯ ದಿನ ಪೊಲೀಸರು ಧ್ವಜಾರೋಹಣ ಮಾಡಲು ಬಂದವರನ್ನೆಲ್ಲ ದಸ್ತಗಿರಿ ಮಾಡಿದ್ದರು.

ವಿದುರಾಶ್ವತ್ಥ ಹತ್ಯಾಕಾಂಡ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಜಿ.ಪಾಪಣ್ಣ ತಮ್ಮ ಸ್ನೇಹಿತರೊಂದಿಗೆ ಭಾಗವಹಿಸಿದ್ದರು. ಬ್ರಿಟಿಷ್ ಅಧಿಕಾರಿ ಹ್ಯಾಮಿಲ್ಟನ್‌ನ ಹೆಸರನ್ನು ಮೈಸೂರಿನ ಕಟ್ಟಡವೊಂದಕ್ಕೆ ಇಡಲು ಸಂಸ್ಥಾನದ ಸರ್ಕಾರ ಮುಂದಾದಾಗ, ಕಾಂಗ್ರೆಸ್ ಪಕ್ಷವು 1939ರ ಫೆಬ್ರುವರಿಯಲ್ಲಿ ಸತ್ಯಾಗ್ರಹಕ್ಕೆ ಕರೆನೀಡಿತು. ಈ ಸತ್ಯಾಗ್ರಹ ದಲ್ಲಿ ಪಾಲ್ಗೊಂಡಿದ್ದ ಕಳವಾರದ ವೆಂಕಟಕೃಷ್ಣಪ್ಪ, ಚಿಕ್ಕಬಳ್ಳಾಪುರದ ಎ.ಮುನಿಯಪ್ಪ, ಮಳ್ಳೂರು ಜಿ.ಪಾಪಣ್ಣ ಮತ್ತು ಮಳಮಾಚನಹಳ್ಳಿ ಎಂ.ಬಿ.ಕೆಂಪಯ್ಯ ಬಂಧಿಸಲ್ಪಟ್ಟರು. ಜಿ.ಪಾಪಣ್ಣ ಮತ್ತು ಎಂ.ಬಿ.ಕೆಂಪಯ್ಯ ಅವರನ್ನು 1939ರ ಅಕ್ಟೋಬರ್ 14ರಂದು ಬಂಧಿಸಿ, ಮೈಸೂರು, ಶಿವಮೊಗ್ಗ ಮತ್ತು ತೀರ್ಥಹಳ್ಳಿ ಬಂದಿಖಾನೆಗಳಲ್ಲಿ ಇಟ್ಟಿದ್ದು ಕೊನೆಗೆ 1940ರ ಮೇ 13ರಂದು ತೀರ್ಥಹಳ್ಳಿ ಜೈಲಿನಲ್ಲಿದ್ದಾಗ ಬಿಡುಗಡೆ ಮಾಡಿದ್ದರು.

ಬ್ರಿಟಿಷರಿಂದ ಭಾರತಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೂ ಅಂದಿನ ಮೈಸೂರು ಮಹಾರಾಜರು ಭಾರತದ ಒಕ್ಕೂಟದೊಡನೆ ವಿಲೀನಗೊಳ್ಳಲು ಸಮ್ಮತಿಸಿರಲಿಲ್ಲ. ಹೀಗಾಗಿ ಅವರ ವಿರುದ್ಧ ಮೈಸೂರು ಸಂಸ್ಥಾನದಾದ್ಯಂತ ಹೋರಾಟ ತೀವ್ರಗೊಂಡವು. ಇಂಥದೇ ಚಳವಳಿಯ ಭಾಗವಾಗಿ ಶಿಡ್ಲಘಟ್ಟದ ತಾಲ್ಲೂಕು ಕಚೇರಿ ಬಳಿ ಸತ್ಯಾಗ್ರಹಿಗಳು ಸೇರಿಕೊಂಡು ಮಹಾರಾಜರ ವಿರುದ್ಧ ಘೋಷಣೆ ಮೊಳಗಿಸಿದ್ದರು. ಸತ್ಯಾಗ್ರಹಿಗಳನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ ಪೋಲೀಸರು, ಅವರು ಜಗ್ಗದಿದ್ದಾಗ ಗೋಲಿಬಾರ್ ಮಾಡಿದ್ದರು.

ಜಿ.ಪಾಪಣ್ಣನವರು ಮುಖಂಡತ್ವ ವಹಿಸಿದ್ದ ಈ ಸತ್ಯಾಗ್ರಹದಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡು, ಹಲವಾರು ಜನ ಕೈಕಾಲು ಮುರಿದು ಕೊಂಡಿದ್ದರು. ದುರಂತದ ಸಂಗತಿಯೆಂದರೆ ಭಕ್ತರಹಳ್ಳಿ ಗ್ರಾಮದ ಕುಂಬಾರ ನಾರಾಯಣಪ್ಪ ಮತ್ತು ರಂಗಪ್ಪ ಎಂಬ ಇಬ್ಬರು ಗುಂಡಿಗೆ ಬಲಿಯಾಗಿದ್ದರು. ಈ ಹೋರಾಟದ ಮುಖಂಡ ಜಿ.ಪಾಪಣ್ಣ ಅವರಿಗೆ ಜೈಲು ಶಿಕ್ಷೆ ವಿಧಿಸಿದ ಕಾರಣ 1947ರ ಸೆಪ್ಟೆಂಬರ್19 ರಿಂದ 1947ರ ಅಕ್ಟೋಬರ್ 16 ರವರೆಗೆ ಚಿಕ್ಕಬಳ್ಳಾಪುರದ ಉಪಕಾರಾಗೃಹದಲ್ಲಿ ಬಂಧಿಯಾಗಿದ್ದರು.

ಶಿಡ್ಲಘಟ್ಟ ತಾಲ್ಲೂಕು ಭಕ್ತರಹಳ್ಳಿ ಗ್ರಾಮದ ಹಿರಿಯರಾದ ಬಂಡಿ ನಾರಾಯಣಪ್ಪ ಆಗಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪರೋಕ್ಷವಾಗಿ ಮಹಾಪೋಷಕ ರಾಗಿದ್ದರು. 1947ರಲ್ಲಿ ‘ಜವಾಬ್ದಾರಿ ಸರ್ಕಾರಕ್ಕಾಗಿ’ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಪೋಲೀಸರು ನಡೆಸಿದ ಗೋಲಿಬಾರಿನಲ್ಲಿ ಭಕ್ತರಹಳ್ಳಿಯ ನಾರಾಯಣಪ್ಪನವರ ವೆಂಕಟರಮಣಪ್ಪ ಮತ್ತು ಕುಂಬಾರ ದೊಡ್ಡ ನಾರಾಯಣ ಎಂಬ ಇಬ್ಬರು ವೀರಮರಣವನ್ನಿಪ್ಪಿದರು.

ಬಂಡಿ ನಾರಾಯಣಪ್ಪ, ನಾಗಮಂಗಲದ ವೆಂಕಟರಾಯಪ್ಪ, ಪಟೇಲ್ ಮುನಿಶಾಮಿಗೌಡ, ಬಿ.ವೆಂಕಟರಾಯಪ್ಪ, ಬಿ.ಆರ್.ಕೆ.ಆರಾಧ್ಯ, ನಾರಾಯಣಸ್ವಾಮಿ ಗೌಡ, ಎಚ್ ಕಾಳಪ್ಪ, ಬಿ.ಆಂಜನೇಯ ಗೌಡ, ಬಂಡಿ ಕ್ಯಾತಣ್ಣ, ತೋಟಿ ರಂಗಪ್ಪ, ಬಿ.ಎನ್.ಪುಟ್ಟಣ್ಣ, ಬಿ.ಎಸ್.ಬಚ್ಚೇಗೌಡ, ಡಿ.ಮಾರಪ್ಪ, ತಳವಾರ ನಾರಾಯಣಪ್ಪ, ನಾಯಕರ ಮುನಿಯಪ್ಪ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು.

ಮಳ್ಳೂರು ಜಿ.ಪಾಪಣ್ಣ, ಕೆ.ಮುತ್ತಕದಳ್ಳಿಯ ಎಂ.ಬಿ.ನಾರಾಯಣಗೌಡ, ಚೌಡಸಂದ್ರದ ನಾರಾಯಣಪ್ಪ, ರಾಮಪ್ಪ, ಬಚ್ಚಹಳ್ಳಿಯ ಚಂಗಲರಾವ್, ಹುಜಗೂರು ಹನುಮಂತರಾಯಪ್ಪ, ಮೇಲೂರು ಸುಬ್ಬಣ್ಣ, ನಂಜುಂಡಶೆಟ್ಟಿ, ಸಂಜೀವಪ್ಪ, ಮಳ್ಳೂರು ಮುನಿಯಪ್ಪ, ಅಪ್ಪೇಗೌಡನಹಳ್ಳಿ ಪಿಳ್ಳಪ್ಪ ಮುಂತಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲೇಬೇಕು.

ರಾಜೀವ್ ಗಾಂಧಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು

ಪಿಂಚಣಿ ನಿರಾಕರಣೆ

ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಬಿ.ವೆಂಕಟರಾಯಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ನೀಡುವ ಪಿಂಚಣಿಯನ್ನು ಪಡೆಯುತ್ತಿರಲಿಲ್ಲ. ಕೆ.ಮುತ್ತಕದಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಬಿ.ನಾರಾಯಣಗೌಡ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲ್ ಬರೋ ಚಳವಳಿಯಲ್ಲಿ ಪಾಲ್ಗೊಂಡು ಮೂರು ತಿಂಗಳು ಜೈಲು ಸೇರಿದ್ದವರು. ಸರ್ಕಾರದಿಂದ ಯಾವುದೇ ರೀತಿಯ ಸವಲತ್ತು ಅಥವಾ ಮಾಶಾಸನ ಪಡೆಯಲಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಬಚ್ಚಹಳ್ಳಿಯ ಚಂಗಲ್ ರಾವ್ ಸ್ವಾತಂತ್ರ್ಯ ನಂತರ ಗಾಂಧೀಜಿ ಅವರ ಸ್ವಾವಲಂಬನೆಯ ಕರೆಗೆ ಓಗೊಟ್ಟು ನಗರದಲ್ಲಿನ ತನ್ನ ಮನೆಯನ್ನು ತೊರೆದು ವಂಶಪಾರಂಪರ್ಯವಾಗಿ ಬಂದಿದ್ದ ಜೋಡಿ ಗ್ರಾಮ ಬಚ್ಚಹಳ್ಳಿಗೆ ಬಂದು ನೆಲೆಸಿ ವ್ಯವಸಾಯ ಮಾಡಿಕೊಂಡು ಮಾದರಿಯಾಗಿ ಬದುಕುತ್ತಿದ್ದರು.

ರಾಜೀವ್ ಗಾಂಧಿ ಭೇಟಿ

ರಾಜೀವ್ ಗಾಂಧಿಯವರು ಪ್ರಧಾನಿಯಾದಾಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ದೆಹಲಿಗೆ ಕರೆಸಿ ಗೌರವಿಸಿದ್ದರು. ಆಗ ಚೌಡಸಂದ್ರ ನಾರಾಯಣಪ್ಪ, ಮೇಲೂರು ಸುಬ್ಬಣ್ಣ, ಮಳ್ಳೂರು ಮುನಿನಾಗಪ್ಪ, ಭಕ್ತರಹಳ್ಳಿ ಬಚ್ಚೆಗೌಡ, ಬಚ್ಚಹಳ್ಳಿ ಚಂಗಲರಾವ್, ಚೌಡಸಂದ್ರ ರಾಮಪ್ಪ, ಮೇಲೂರು ಸಂಜೀವಪ್ಪ, ಹುಜಗೂರು ಹನುಮಂತರಾಯಪ್ಪ, ಮಳ್ಳೂರು ಮುನಿಯಪ್ಪ, ಅಪ್ಪೇಗೌಡನಹಳ್ಳಿ ಪಿಳ್ಳಪ್ಪ ಅವರು ದೆಹಲಿಗೆ ಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.