ADVERTISEMENT

ರೈತರು ಪೂರೈಸುವ ಹಾಲಿನ ದರ ಇಳಿಕೆ; ಕೋಚಿಮುಲ್ ವಿರುದ್ಧ MP ಡಾ.ಕೆ.ಸುಧಾಕರ್ ಆಕ್ರೋಶ

ಡಿಸಿ ಕಚೇರಿ ಬಳಿ 10ರಂದು ಉಪವಾಸ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 14:24 IST
Last Updated 6 ಜುಲೈ 2024, 14:24 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು   

ಚಿಕ್ಕಬಳ್ಳಾಪುರ: ರೈತರು ಪೂರೈಸುತ್ತಿರುವ ಹಾಲಿನ ದರವನ್ನು ಲೀಟರ್‌ಗೆ ₹ 2 ಇಳಿಕೆ ಮಾಡಿರುವ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಕೋಚಿಮುಲ್‌)  ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿ ಜು.10ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ನಡೆಸಲಾಗುವುದು ಎಂದು ಸಂಸದ ಡಾ.ಕೆ.ಸುಧಾಕರ್ ಪ್ರಕಟಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು, ಹೈನುಗಾರರು, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು, ಮುಖಂಡರು ಉಪವಾಸದಲ್ಲಿ ‌ಪಾಲ್ಗೊಳ್ಳುವರು. ನಂತರ ಕೋಲಾರ ಜಿಲ್ಲೆಯ ಮುಖಂಡರ ಜೊತೆ ಚರ್ಚಿಸಿ ಅಲ್ಲಿಯೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ದರ ಇಳಿಕೆ ಆದೇಶವನ್ನು ಕೋಚಿಮುಲ್ ತಕ್ಷಣವೇ ವಾಪಸ್ ಪಡೆಯಬೇಕು. ಲೀಟರ್ ಹಾಲಿನ ದರವನ್ನು ₹ 3 ಹೆಚ್ಚಿಸಿ ರೈತರಿಗೆ ಒಂದು ಲೀಟರ್ ಹಾಲಿಗೆ ₹ 34.40 ನೀಡಬೇಕು ಎಂದರು. 

ADVERTISEMENT

ಈ ಹಿಂದೆ ನಿತ್ಯ 9 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಈಗ 12.5 ಲಕ್ಷ ಲೀಟರ್ ಉತ್ಪಾದನೆ ಆಗುತ್ತಿದೆ. ಈ ಕಾರಣದಿಂದ ದರ ಇಳಿಸಲಾಗಿದೆ ಎಂದು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳುತ್ತಾರೆ. ಇದು ರೈತರನ್ನು ಉದ್ಧಾರ ಮಾಡುವ ಮಾರ್ಗವೇ ಎಂದು ಪ್ರಶ್ನಿಸಿದರು.

ಒಂದು‌ ಹಸುವಿಗೆ ನಿತ್ಯ ಐದು ಕೆ.ಜಿ ಪಶು ಆಹಾರ ಬೇಕು. 25ರಿಂದ 50 ಕೆ.ಜಿ ಮೇವು ಅಗತ್ಯ. 50 ಕೆ.ಜಿ ಪಶು ಆಹಾರದ ಬೆಲೆ ₹ 1,150 ಇದೆ. ಈಗ ಹಾಲಿನ ದರ ಇಳಿಸಿದ್ದಾರೆ. ಇದರಿಂದ ರೈತರ ಉದ್ಧಾರ ಸಾಧ್ಯವಾ ಎಂದು ಪ್ರಶ್ನಿಸಿದರು.

ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲಾಗಿತ್ತು. ಒಂದೂವರೆ ವರ್ಷ ಒಕ್ಕೂಟ ಕಾರ್ಯನಿರ್ವಹಿಸಿತು. ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣಕ್ಕೆ ಐದು ಎಕರೆ ಜಾಗ ಹೆಚ್ಚುವರಿಯಾಗಿ ಬೇಕು ಎಂದು ಕೇಳಿದ್ದೆವು. ಅದಕ್ಕೂ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಕ್ಕೂಟ ರದ್ದುಗೊಳಿಸಿತು ಎಂದರು. 

ಒಕ್ಕೂಟ ವಿಭಜನೆ ಅವೈಜ್ಞಾನಿಕ ಎನ್ನುತ್ತಾರೆ. ಆದರೆ ಹಾವೇರಿ ಜಿಲ್ಲೆಯಲ್ಲಿ ನಿತ್ಯ 1.5 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಕೋಚಿಮುಲ್ ವಿಭಜಿಸಿದಾಗಲೇ ಧಾರವಾಡ ಒಕ್ಕೂಟ ವಿಭಜಿಸಿ ಹಾವೇರಿಗೆ ಪ್ರತ್ಯೇಕ ಒಕ್ಕೂಟ ರಚಿಸಲಾಯಿತು. ಅಭಿವೃದ್ಧಿಗೆ ಸರ್ಕಾರ ₹ 25 ಕೋಟಿ ನೀಡಿತು ಎಂದರು.

ಈ ಹಿಂದೆ ಚಾಮರಾಜನಗರಕ್ಕೂ ಒಕ್ಕೂಟ ರಚಿಸಿದರು. ಯಾವ ಮಾನದಂಡದಲ್ಲಿ ಅಲ್ಲಿಗೆ ಒಕ್ಕೂಟ ರಚಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿತ್ಯ 5.5 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಇಲ್ಲಿ ಮೆಗಾ ಡೇರಿ ನಿರ್ಮಾಣವಾಗಿದೆ. ಒಕ್ಕೂಟ ಕಾರ್ಯಾಚರಣೆಗೆ ಎಲ್ಲ ಸೌಲಭ್ಯಗಳೂ ಇವೆ. ಹಾಲಿನ ಘಟಕ ನಿರ್ಮಿಸಿ ವಿಭಜಿಸಬೇಕಾಗಿತ್ತು ಎನ್ನುತ್ತಾರೆ. ಆದರೆ ಈಗ ಘಟಕ ನಿರ್ಮಾಣವಾಗಿದೆಯೇ? ಹೀಗಿದ್ದರೂ ವಿಭಜಿಸುವ ಮಾತನಾಡುತ್ತಿದ್ದಾರೆ ಎಂದರು.

ಡಾ.ಕೆ.ಸುಧಾಕರ್ ಮತ್ತು ಬಿಜೆಪಿಗೆ ಹೆಸರು ಬರುತ್ತದೆ ಎನ್ನುವ ಉದ್ದೇಶದಿಂದ ಒಕ್ಕೂಟ ರಚನೆ ರದ್ದುಗೊಳಿಸಿದರು. ಈಗ ವಿಭಜಿಸುವ ಉದ್ದೇಶವಿದ್ದರೆ ಹೆಚ್ಚುವರಿಯಾಗಿ 5 ಎಕರೆ ಜಮೀನು ಕೊಡಲಿ, ಪ್ಯಾಕೆಟ್ ಘಟಕ ಸ್ಥಾಪಿಸಲಿ ಎಂದರು.

ಕೋಚಿಮುಲ್‌ ಚುನಾವಣೆಯನ್ನು ಮುಂದೂಡುವ ಪ್ರಯತ್ನಗಳನ್ನು ಸಹ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಭಾಗದ ರೈತರು ಕೋಚಿಮುಲ್ ವಿಚಾರವಾಗಿ ಮೌನಕ್ಕೆ ಶರಣಾಗಿದ್ದಾರೆ. ಎಲ್ಲರೂ ಈ ಅನ್ಯಾಯದ ವಿರುದ್ಧ ಹೋರಾಡಬೇಕಿದೆ ಎಂದರು.

ದಲಿತ ಸಂಘಟನೆಗಳು ಬೀದಿಗಿಳಿಯಲಿ: ಕಾಂಗ್ರೆಸ್ ನಾಯಕರು ನಾವು ದಲಿತ ಸಮುದಾಯ ಉದ್ಧಾರಕರು ಎಂದು ಭಾಷಣ ಮಾಡುತ್ತಾರೆ. ಆದರೆ ಎಸ್‌ಸಿಎಸ್‌ಪಿ, ಟಿಎಸ್‌ಪಿಗೆ ಸೇರಿದ ₹ 14 ಸಾವಿರ ಕೋಟಿ ಯನ್ನು ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗೆ ಬಳಸಿ ಅನ್ಯಾಯ ಮಾಡಿದೆ. ಇನ್ನು ದಲಿತ ಸಂಘಟನೆಗಳು ಮನೆಯಲ್ಲಿ ಕೂರದೆ ರಸ್ತೆಗಿಳಿದು ಪ್ರತಿಭಟನೆ ಮಾಡಬೇಕು. ಇದಕ್ಕೆ ಬಿಜೆಪಿ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲಕುಂಟಹಳ್ಳಿ ಮುನಿಯಪ್ಪ ಮಾತನಾಡಿ, ‘ಬಾಗೇಪಲ್ಲಿಯಲ್ಲಿ ಜು. 23ರಂದು ಕೋಚಿಮುಲ್ ಸಾಮಾನ್ಯ ಸಭೆ ಕರೆದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆಸಿದರೆ ಗಲಾಟೆ ಆಗಬಹುದು ಎಂದು ಅಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಮಾಜಿ ಶಾಸಕರಾದ ಎಂ. ಶಿವಾನಂದ್, ಎಂ.ರಾಜಣ್ಣ, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಕೆ.ವಿ.ನವೀನ್ ಕಿರಣ್, ಸಿ.ಆರ್.ನರಸಿಂಹಮೂರ್ತಿ, ಕೆ.ಆರ್.ರೆಡ್ಡಿ, ಮುನೇಗೌಡ, ಕಾಳೇಗೌಡ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

‘ನೇಮಕಾತಿ ಹಗರಣ; ಬಿಜೆಪಿಯವರ ಕಾಲುಹಿಡಿದಿದ್ದಾರೆ’:

ಕೋಚಿಮುಲ್ ನೇಮಕಾತಿಯಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ. ಜಾರಿ ನಿರ್ದೇಶನಾಲಯದ (ಇಡಿ) ಬಳಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದಾಖಲೆಗಳು ಇವೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು. ಹಗರಣಕ್ಕೆ ಸಂಬಂಧಿಸಿದಂತೆ ಯಾರು ಯಾರು ನಮ್ಮವರ (ಬಿಜೆಪಿಯವರ) ಕಾಲು ಹಿಡಿದ್ದಾರೆ ಎನ್ನುವುದು ಗೊತ್ತು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.

ಉಪವಾಸದಿನದಂದೇ ಕೆಡಿಪಿ ಸಭೆ

10ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಮತ್ತೊಂದೆಡೆ ಅಂದೇ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ ಆಯೋಜಿಸಲಾಗಿದೆ. ಎರಡೂ ಕಾರ್ಯಕ್ರಮಗಳು ಅಂದೇ ನಡೆಯುತ್ತವೆಯೇ ಅಥವಾ ದಿನಾಂಕ ಬದಲಾಗುತ್ತದೆಯೇ ಎನ್ನುವ ಕುತೂಹಲ ಜನರಲ್ಲಿ ಇದೆ.

‘ನಮ್ಮ ಹೆಸರು ಅಳಿಸುವ ಯತ್ನ’

ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ನಗರೋತ್ಥಾನ–4ರ ಯೋಜನೆಯಡಿ ₹ 45 ಕೋಟಿ ಅನುದಾನ ಬಂದಿತ್ತು. ಇದರ ಕ್ರಿಯಾ ಯೋಜನೆಗೆ ಅನುಮೋದನೆ ಸಹ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ರದ್ದುಗೊಳಿಸಿತು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು. ಇಲ್ಲಿನ ಶಾಸಕರು ಮತ್ತು ಸಚಿವರು ಈ 14 ತಿಂಗಳಲ್ಲಿ 14 ಕೋಟಿ ಬಂದಿಲ್ಲ. ಅಭಿವೃದ್ಧಿ ಮತ್ತು ನಗರದ ಬಗ್ಗೆ ಯಾವುದೇ ಮುನ್ನೋಟವಿಲ್ಲ. ಹಿಂದಿನ ಕಾಮಗಾರಿಗಳನ್ನೇ ಮತ್ತೆ ಕೈಗೆತ್ತಿಕೊಂಡಿದ್ದಾರೆ. ನಾವು ಹಣ ತಂದಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಹೆಸರನ್ನು ಅಳಿಸಿ ಹಾಕಿ ಅವರ ಹೆಸರು ಹಾಕಿಕೊಳ್ಳಲು ಮುಂದಾಗಿದ್ದಾರೆ ಎಂದರು. ಈ ಹಿಂದೆ ರೂಪಿಸಿದ್ದ ಕ್ರಿಯಾ ಯೋಜನೆ ರದ್ದುಗೊಳಿಸಲು ಏನು ಕಾರಣ ಎನ್ನುವುದಕ್ಕೆ ಗುತ್ತಿಗೆದಾರರು ಉತ್ತರ ಹೇಳಬೇಕು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.