ADVERTISEMENT

ಚಿಂತಾಮಣಿ | ಜುಲೈ 1ರಿಂದ ಹೊಸ ಚಾಲನಾ ನಿಯಮ: ಡಿವೈಎಸ್ಪಿ ಮುರಳೀಧರ್

ಉಲ್ಲಂಘಿಸಿದರೆ ಹೆಚ್ಚು ದಂಡ; ವಾಹನ ಚಾಲಕರಿಗೆ ಪೊಲೀಸರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 14:26 IST
Last Updated 6 ಜೂನ್ 2024, 14:26 IST
ಚಿಂತಾಮಣಿಯಲ್ಲಿ ಗುರುವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಡಿವೈಎಸ್ಪಿ ಮುರಳೀಧರ್ ಮಾತನಾಡಿದರು
ಚಿಂತಾಮಣಿಯಲ್ಲಿ ಗುರುವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಡಿವೈಎಸ್ಪಿ ಮುರಳೀಧರ್ ಮಾತನಾಡಿದರು   

ಚಿಂತಾಮಣಿ: ಬಹಳಷ್ಟು ಜನರು ರಸ್ತೆ ಸುರಕ್ಷತಾ ನಿಯಮ ಪಾಲಿಸುವುದರಲ್ಲಿ ಹಿಂದುಳಿದಿದ್ದಾರೆ. ನಿಯಮ ಪಾಲನೆಗೆ ಅವರ ಬೇಜವಾಬ್ದಾರಿಯಿಂದಲೇ ಪಘಾತಗಳು ಸಂಭವಿಸುತ್ತಿವೆ ಎಂದು ಡಿವೈಎಸ್ಪಿ ಮುರಳೀಧರ್ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪೊಲೀಸ್ ಇಲಾಖೆ ವಾಹನ ಚಾಲಕರಿಗಾಗಿ ಆಯೋಜಿಸಿದ್ದ  ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಬಹುತೇಕ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುತ್ತಿದ್ದಾರೆ. ಇನ್ನು ಮುಂದೆ ಅಂತಹ ಚಾಲಕರ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು. ಜುಲೈ 1ರಿಂದ ನೂತನ ಚಾಲನಾ ನಿಯಮ ಜಾರಿಗೆ ಬರುತ್ತವೆ. ನಿಯಮ ಉಲ್ಲಂಘಿಸಿದರೆ ದಂಡ ಹೆಚ್ಚಾಗಿರುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಕುಡಿದು ಮತ್ತು ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲಾಯಿಸುವುದು. ದ್ವಿಚಕ್ರವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚಿನ ಜನ ಪ್ರಯಾಣಿಸುವುದು, ಅಪ್ರಾಪ್ತ ವಯಸ್ಸಿನ ಬಾಲಕರು ವಾಹನಗಳ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧ. ವಾಹನವನ್ನು ಮನೆಯಿಂದ ಹೊರಗೆ ತೆಗೆಯಬೇಕಾದರೆ ಚಾಲನಾ ಪರವಾನಗಿ, ವಾಹನದ ಆರ್‌ಸಿ, ವಿಮೆ ಮತ್ತಿತರ ಎಲ್ಲ ದಾಖಲೆ ಹೊಂದಿರಬೇಕು. ದಾಖಲೆಗಳು ಇಲ್ಲದಿದ್ದರೂ ದಂಡ ವಿಧಿಸಲಾಗುವುದು. ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡಿದರೆ ಐಎಂವಿ ಕಾಯ್ದೆಯಡಿ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ನಗರಠಾಣೆ ಇನ್ಸ್‌ಸ್ಪೆಕ್ಟರ್ ವಿಜಿಕುಮಾರ್ ಮಾತನಾಡಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರಿಗೆ ಪೋಷಕರು ವಾಹನ ನೀಡಬಾರದು. ದೂರುಗಳು ದಾಖಲಾದರೆ ಬಾಲಕರ ಜತೆಗೆ ಪೋಷಕರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಾರ್ರವಜನಿಕರ ಜೀವ ರಕ್ಷಣೆ ಹಾಗೂ ಕುಟುಂಬದವರ ಕ್ಷೇಮಕ್ಕಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಗ್ರಾಮಾಂತರ ಠಾಣೆಯ ಇನ್ಸ್ ಸ್ಪೆಕ್ಟರ್ ಶಿವಕುಮಾರ್, ಆಟೊ, ಟೆಂಪೊ ಮತ್ತಿತರ ವಾಹನಗಳ ಚಾಲಕರು ಭಾಗವಹಿಸಿದ್ದರು.

ಚಿಂತಾಮಣಿಯಲ್ಲಿ ಗುರುವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಬಾಗವಹಿಸಿದ್ದ ವಾಹನ ಚಾಲಕರು

ಹೆಚ್ಚಿದ ಹೆಲ್ಲೆಟ್‌ರಹಿತ ಪ್ರಯಾಣ

ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುವರ ಸಂಖ್ಯೆ ನಗರದಲ್ಲಿ ಹೆಚ್ಚಾಗಿದೆ. ಪೊಲೀಸರ ದಂಡ ವಿಧಿಸುತ್ತಾರೆ ಎಂಬ ಕಾರಣ ಹೆಲ್ಮೆಟ್‌ ಧರಿಸಬೇಡಿ ಜೀವ ಉಳಿಸಿಕೊಳ್ಳಲು ಹಾಗೂ ಕುಟುಂಬದ ಕ್ಷೇಮಕ್ಕಾಗಿ ಧರಿಸಿ ಎಂದು ಡಿವೈಎಸ್ಪಿ ಮುರಳೀಧರ್ ಹೇಳಿದರು. ಕಡ್ಡಾಯವಾಗಿ ವಾಹನಗಳ ವಿಮೆ ಮಾಡಿಸಬೇಕು. ಅನೇಕ ಸಂದರ್ಭಗಳಲ್ಲಿ ವಿಮೆ ಮಾಡಿಸದಿದ್ದರೆ ಜೈಲು ಪಾಲಾಗುವ ಪರಿಸ್ಥಿತಿ ಎದುರಾಗಬಹುದು. ಅಪಘಾತ ಆಗಾದ ವಿಡಿಯೊ ಮಾಡುವುದನ್ನು ಬಿಟ್ಟು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಬೇಕು ಎಂದು ಮನವಿ ಮಾಡಿದರು. ದೂರುಗಳ ಸುರಿಮಳೆ ರಸ್ತೆಗಳಲ್ಲಿ ಕೆಲವು ಪುಂಡರು ವೀಲ್ಹಿಂಗ್ ಮಾಡುವುದು ಶಾಲಾ–ಕಾಲೇಜುಗಳು ಮತ್ತು ವಿದ್ಯಾಸಂಸ್ಥೆಗಳ ಸುತ್ತಮುತ್ತಲು ಕಿಡಿಗೇಡಿಗಳು ಹೆಣ್ಣುಮಕ್ಕಳನ್ನು ಚುಡಾಯಿಸುವುದು ಅಸಭ್ಯವಾಗಿ ವರ್ತಿಸುವುದು ಎಪಿಎಂಸಿಯಲ್ಲಿ ರಾತ್ರಿಯಲ್ಲಿ ಲಾರಿ ಚಾಲಕರ ಮೇಲೆ ಹಲ್ಲೆ ನಡೆಸುವುದು ಮೊಬೈಲ್ ಮತ್ತು ಹಣ ಕಿತ್ತುಕೊಳ್ಳುವ ಪ್ರಕರಣಗಳು ಸೇರಿದಂತೆ ದೂರುಗಳ ಸುರಿಮಳೆ ಕಾರ್ಯಕ್ರಮದಲ್ಲಿ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.