ಚಿಂತಾಮಣಿ: ನಗರಠಾಣೆ ಪೊಲೀಸರು ಮಂಗಳವಾರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಆಟೊಗಳಿಗೆ ದಂಡ ವಿಧಿಸಿದರು.
ಆಟೊ ಚಾಲಕರು ಹೆಚ್ಚಿನ ಹಣ ಕೇಳುತ್ತಾರೆ. ಕರೆದ ಕಡೆ ಬರುವುದಿಲ್ಲ. ಚಾಲಕರು ಸಮವಸ್ತ್ರ ಧರಿಸುವುದಿಲ್ಲ. ರಾತ್ರಿ ಪ್ರಯಾಣಿಕರಿಂದ ಮನಬಂದಂತೆ ಹಣ ಪೀಕುತ್ತಾರೆ. ವಾಹನಗಳಿಗೆ ವಿಮೆ, ಆರ್.ಸಿ ಮತ್ತಿತರ ದಾಖಲೆಗಳು ಇರುವುದಿಲ್ಲ ಎಂಬ ದೂರುಗಳು ಕೇಳಿಬರುತ್ತಿದ್ದವು.
ಈ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ನಗರದ ವಿವಿಧ ವೃತ್ತಗಳಲ್ಲಿ ಆಟೊಗಳನ್ನು ನಿಲ್ಲಿಸಿ ಪರಿಶೀಲಿಸಿದರು. ದಾಖಲೆಗಳು ಇಲ್ಲದ ಮತ್ತು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 50 ಆಟೊಗಳಿಗೆ ದಂಡ ವಿಧಿಸಿದರು.
ಇನ್ಸ್ಪೆಕ್ಟರ್ ವಿಜಿಕುಮಾರ್ ಮಾತನಾಡಿ, ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ನಿತ್ಯ ಪರಿಶೀಲನೆ ನಡೆಸಲಾಗುವುದು. ಆಟೊ ಚಾಲಕರು ತಮ್ಮ ವರ್ತನೆ ತಿದ್ದಿಕೊಳ್ಳಬೇಕು. ದೂರುಗಳಿಗೆ ಅವಕಾಶವಿಲ್ಲದಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮೊಕದ್ದಮೆ ಹೂಡಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.