ಚಿಕ್ಕಬಳ್ಳಾಪುರ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಭೋರ್ಗರೆಯುತ್ತಿದೆ. ಆದರೆ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಕಡೆಗಳಿಗೆ ಉತ್ತಮ ಮಳೆ ಇಲ್ಲವಾಗಿದೆ. ಗೌರಿಬಿದನೂರು ತಾಲ್ಲೂಕಿನ ಅಲ್ಲಲ್ಲಿ ಮಾತ್ರ ಕಳೆದ ಮೂರು ದಿನಗಳ ಹಿಂದೆ ಉತ್ತಮ ಮಳೆಯಾಗಿದೆ.
ಇದನ್ನು ಹೊರತುಪಡಿಸಿ ಜಿಲ್ಲೆಯ ಯಾವ ಭಾಗದಲ್ಲಿಯೂ ಬಿರುಸು ಮಳೆ ಇಲ್ಲ. 2021 ಮತ್ತು 2022ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಆಯಿತು. ರಾಜ್ಯದಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಮಳೆ ಸುರಿದ ಜಿಲ್ಲೆಗಳಲ್ಲಿ ಒಂದು ಎನಿಸಿತು. ಆದರೆ 2023ರಲ್ಲಿ ತೀವ್ರ ಬರ ಬಿದ್ದಿತ್ತು. ಜಿಲ್ಲೆಯ ಆರೂ ತಾಲ್ಲೂಕುಗಳು ತೀವ್ರ ಬರಪೀಡಿತ ತಾಲ್ಲೂಕುಗಳು ಎನ್ನುವ ಹಣೆಪಟ್ಟಿ ಪಡೆದವು.
ಮೂರು ದಿನಗಳ ಹಿಂದೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮತ್ತು ಚಿಂತಾಮಣಿಯಲ್ಲಿ ಸಾಮಾನ್ಯ ಮಳೆ ಸುರಿಯಿತು. ಗೌರಿಬಿದನೂರಿನಲ್ಲಿ ಉತ್ತಮ ಮಳೆ ಸುರಿಯಿತು. ಇದನ್ನು ಹೊರತುಪಡಿಸಿದರೆ ಜಿಲ್ಲೆಗೆ ಅತ್ಯುತ್ತಮ ಎನಿಸುವ ಮಳೆ ಇನ್ನೂ ಸುರಿದಿಲ್ಲ.
ಭಾನುವಾರ ಮಧ್ಯಾಹ್ನ ಚಿಕ್ಕಬಳ್ಳಾಪುರದಲ್ಲಿ ಕೆಲವು ಕಾಲ ಮಳೆ ಬಿದ್ದಿತ್ತು. ಆರಂಭದಲ್ಲಿ ಬಿರುಸು ಪಡೆಯಲಿದೆ ಎನಿಸಿದ ಮಳೆ ನಂತರ ತಣ್ಣಗಾಯಿತು. ಹೀಗೆ ಜಿಲ್ಲೆಯ ರೈತರು, ಜನಸಾಮಾನ್ಯರು ಮಳೆಗಾಗಿ ಕಾತರಿಸಿದ್ದಾರೆ. ಆದರೆ ಜೋರು ಮಳೆ ಮಾತ್ರ ಸುರಿಯುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.