ADVERTISEMENT

ಒಳ ಚರಂಡಿ ನಿರ್ಮಾಣಕ್ಕೆ ₹38.47 ಕೋಟಿ ಬಿಡುಗಡೆ: ಶಾಸಕ ಬಿ.ಎನ್.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:27 IST
Last Updated 24 ಆಗಸ್ಟ್ 2024, 15:27 IST
ಶಿಡ್ಲಘಟ್ಟದ ಒಳಚರಂಡಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕದ ಬಳಿ ಶಾಸಕ ಬಿ.ಎನ್.ರವಿಕುಮಾರ್ ಅವರು ಒಳಚರಂಡಿ ಯೋಜನೆ ರೂಪಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು
ಶಿಡ್ಲಘಟ್ಟದ ಒಳಚರಂಡಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕದ ಬಳಿ ಶಾಸಕ ಬಿ.ಎನ್.ರವಿಕುಮಾರ್ ಅವರು ಒಳಚರಂಡಿ ಯೋಜನೆ ರೂಪಿಸುವ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು   

ಶಿಡ್ಲಘಟ್ಟ: ನಗರದಲ್ಲಿ ಒಳ ಚರಂಡಿ ನಿರ್ಮಾಣಕ್ಕೆ ಒಟ್ಟು ₹72 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿದ್ದು, ಸರ್ಕಾರದಿಂದ ಮೊದಲನೇ ಹಂತದಲ್ಲಿ ₹38.47 ಕೋಟಿ ಬಿಡುಗಡೆಯಾಗಿದೆ. ನಗರದಲ್ಲಿನ 12,700 ಮನೆಗಳಿಗೂ ಒಳಚರಂಡಿ ಸಂಪರ್ಕ ಕಲ್ಪಿಸಲಾಗುವುದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರ ಹೊರವಲಯದಲ್ಲಿರುವ ಒಳಚರಂಡಿ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ನಗರದಲ್ಲಿ ಎರಡನೇ ಹಂತದ ಒಳಚರಂಡಿ ಕಾಮಗಾರಿ ಪ್ರಾರಂಭಿಸಲು, ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಪ್ರಾರಂಭಿಸಲು ರೂಪುರೇಷೆ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ  ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ನಗರಸಭೆ ತಾಂತ್ರಿಕ ಸಿಬ್ಬಂದಿ ಒಳಗೊಂಡಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದರು.

ADVERTISEMENT

ನಮ್ಮ ರಾಜ್ಯದಲ್ಲಿ ಶಿವಮೊಗ್ಗ ನಗರದಲ್ಲಿ ಒಳಚರಂಡಿ ಕಾಮಗಾರಿ ಮಾದರಿಯಾಗಿದೆ. ಅಲ್ಲಿಗೆ ಮೂರೂ ಇಲಾಖೆಗಳ ಅಧಿಕಾರಿಗಳು ಹೋಗಿ ಅಧ್ಯಯನ ಮಾಡಿ, ಸಮನ್ವಯತೆಯಿಂದ ಶಿಡ್ಲಘಟ್ಟದಲ್ಲಿ ಒಳಚರಂಡಿ ಕಾಮಗಾರಿಯ ಯೋಜನೆ ಸಿದ್ಧಪಡಿಸುವಂತೆ ತಿಳಿಸಿರುವೆ ಎಂದರು.

2040ಕ್ಕೆ ಶಿಡ್ಲಘಟ್ಟದಲ್ಲಿ ಎಷ್ಟು ಜನಸಂಖ್ಯೆ, ಮನೆಗಳ ಸಂಖ್ಯೆ ಇರುವುದೆಂದು ಅಂದಾಜಿಸಿ ಯೋಜನೆ ಸಿದ್ಧಪಡಿಸಬೇಕು. ಈಗ ಸಧ್ಯಕ್ಕಿರುವ ಒಳಚರಂಡಿಯಲ್ಲಿ ಅಲ್ಲಲ್ಲಿ ನೀರು ನಿಲ್ಲುವುದು, ರಸ್ತೆಗಳ ಮೇಲೆ ಹರಿಯುವ ಸಮಸ್ಯೆಗಳಿವೆ. ತಾಂತ್ರಿಕತೆ ಬಳಸಿ ಸಮಸ್ಯೆ ನಿವಾರಿಸಬೇಕು ಎಂದು ಹೇಳಿದ್ದೇನೆ ಎಂದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಇಇ ಆಶಾ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಎಂಜಿನಿಯರ್ ಮಾಧವಿ, ಪೌರಾಯುಕ್ತ ಮಂಜುನಾಥ್, ನಗರಸಭೆ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.