ಗುಡಿಬಂಡೆ: ತ್ರೇತಾಯುಗದಲ್ಲಿ ರಾಮ, ಸೀತೆ, ಲಕ್ಷ್ಮಣ ಸಮೇತ 14 ವರ್ಷಗಳ ವನವಾಸದಲ್ಲಿ ಲಂಕೆಯ ಮೇಲೆ ಯುದ್ದ ಮಾಡುವ ಸಲುವಾಗಿ ದಂಡಕಾರಣ್ಯ ಪ್ರದೇಶ ಮಾರ್ಗವಾಗಿ ಹೋಗುವಾಗ ಗುಡಿಬಂಡೆಯ ದಂಡಕಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಸುರಸದ್ಮಗಿರಿ ಬೆಟ್ಟದಲ್ಲಿ ಶಿವಲಿಂಗ ಪ್ರತಿಷ್ಠೆ ಮಾಡಿದ್ದು ಇದು ಶ್ರೀರಾಮಲಿಂಗೇಶ್ವರ ಎಂದು ಪ್ರಸಿದ್ಧಿ ಪಡೆದಿದೆ.
ತದನಂತರ 17ನೇ ಶತಮಾನದ ಪಾಳೇಗಾರರ ಕಾಲದಲ್ಲಿ ಹಾವಳಿ ಬೈರೇಗೌಡ ಇದರ ಅಳ್ವಿಕೆಯಲ್ಲಿ ಈ ಬೆಟ್ಟವನ್ನು ಏಳುಸುತ್ತಿನ ಕೋಟೆ, ದೇವಾಲಯ, ಬೃಹತ್ ಆಕಾರದಲ್ಲಿ ಒಂದು ಪ್ರಾಂಗಣ, ವಾಸಕ್ಕೆ ಮನೆಗಳು, ಜೈಲು, ಬೆಟ್ಟದಲ್ಲಿ ಸಹಜವಾಗಿ 19 ಕೊಳಗಳಿದ್ದು ಇದನ್ನು ಅಭಿವೃದ್ಧಿಪಡಿಸಿ ರಾಮ ಕೊಳ, ಸೀತೆ ಕೊಳ, ಲಕ್ಷ್ಮಣ ಕೊಳಗಳಾಗಿ ಹೆಸರು ಪಡೆದಿದೆ.
ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಪ್ರತಿ ಸೋಮವಾರ ರಾಮಲಿಂಗೇಶ್ವರ, ಪಾರ್ವತಿಗೆ ಅಭಿಷೇಕ, ಪೂಜೆ ನಡೆಸಲಾಗುತ್ತದೆ. ಶಿವರಾತ್ರಿ ಸಮಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ ಎಂದು ದೇವಾಲಯ ಅರ್ಚಕ ರಾಮನಾಥ ದೀಕ್ಷಿತ್ ಹೇಳಿದರು.
ಹಿರಿಯರು ಶ್ರೀರಾಮ ವನವಾಸದ ಸಮಯದಲ್ಲಿ ಈ ಪ್ರದೇಶದಲ್ಲಿ ಸಂಚರಿಸುವಾಗ ಬೆಟ್ಟದ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದರು ಎಂದು ಹೇಳುತ್ತಿದ್ದರು ಎಂದು ವಕೀಲ ಡಿ.ಎ.ರಾಮನಾಥ ಹೇಳಿದರು.
ತಾಳೆ ಗ್ರಂಥಗಳಲ್ಲಿ ಶ್ರೀರಾಮಚಂದ್ರ ವನವಾಸದ ಸಮಯದಲ್ಲಿ 108 ಶಿವಲಿಂಗ ಪ್ರತಿಷ್ಠಾಪನೆ ಮಾಡಿರುವ ಪೈಕಿ ಗುಡಿಬಂಡೆ ಸುರಸದ್ಮಗಿರಿ ಬೆಟ್ಟದಲ್ಲಿರುವ ಶಿವಲಿಂಗವು ಒಂದಾಗಿದೆ ಎನ್ನುತ್ತಾರೆ ಸ.ನಾ.ನಾಗೇಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.