ಚಿಂತಾಮಣಿ: ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಂಗಾನಹಳ್ಳಿಯಲ್ಲಿ ಅತ್ತೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಅಳಿಯನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಚಂದ್ರ ಬಂಧಿತ ಆರೋಪಿ.
ಅಕ್ಟೋಬರ್ 8 ರಂದು ಕವಿತಾ(45) ಎಂಬುವವರನ್ನು ಚಂದ್ರ ಕೊಲೆ ಮಾಡಿದ್ದ. ಕವಿತಾ ಅವರು ತನ್ನ ಮಗಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿಕೊಟ್ಟದ್ದರು.
ಕೌಟುಂಬಿಕ ಕಾರಣದಿಂದ ಚಂದ್ರ ಬಿಂಗಾನಹಳ್ಳಿಗೆ ಬಂದು ಗಲಾಟೆ ಮಾಡಿ ಮಚ್ಚಿನಿಂದ ಅತ್ತೆ ಕವಿತಾಳ ಕತ್ತಿಗೆ ಮತ್ತು ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್.ಪಿ ಕುಶಾಲ್ ಚೌಕ್ಸೆ ಮತ್ತು ಹೆಚ್ಚುವರಿ ಎಸ್.ಪಿ ರಾಜಾ ಇಮಾಮ್ ಖಾಸಿಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆರೋಪಿ ಮತ್ತೆಗಾಗಿ ವಿಶೇಷ ತಂಡ ರಚಿಸುವಂತೆ ಡಿವೈಎಸ್ಪಿ ಮುರಳೀಧರ್ಗೆ ಸೂಚಿಸಿದ್ದರು. ಇನ್ಸ್ ಸ್ಪೆಕ್ಟರ್ ಶಿವರಾಜ್ ನೇತೃತ್ವದಲ್ಲಿ ವಿಶೇಷ ಪತ್ತೆದಾರಿ ದಳವನ್ನು ರಚಿಸಲಾಗಿತ್ತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಪತ್ತೆದಾರಿ ದಳವು ಕೃತ್ಯ ನಡೆದ ಸ್ಥಳವನ್ನು ಪರಿಶೀಲಿಸಿ ಮೃತಳ ಸಂಬಂಧಿಕರು, ಸ್ಥಳೀಯರನ್ನು ವಿಚಾರಣೆ ಮಡಿ ಮಾಹಿತಿ ಸಂಗ್ರಹಿಸಿದ್ದರು. ಆ ಭಾಗದ ಎಲ್ಲ ಸಿಸಿ ಕ್ಯಾಮೆರಾ ಪುಟೇಜ್ ಸಹ ಸಂಗ್ರಹಿಸಿದ್ದರು. ತಾಂತ್ರಿಕ ಮತ್ದತು ವೈಜ್ಞಾನಿಕ ತನಿಖಾ ಪದ್ಧತಿಗಳನ್ನು ಬಳಸಿ ಕೃತ್ಯ ಮಾಡಿರುವ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದೆ. ಆರೋಪಿಯು ಬಳಸಿದ್ದ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.