ಚಿಂತಾಮಣಿ: ಮನೆ ಸಮೀಪದಲ್ಲೇ ಆಟವಾಡುತ್ತಿದ್ದ ಮೂರು ವರ್ಷದ ಮಗುವನ್ನು ಚಿಕ್ಕಪ್ಪನೇ ಕತ್ತು ಕೊಯ್ದು ಕೊಲೆ ಮಾಡಿರುವ ಪ್ರಕರಣ ತಾಲ್ಲೂಕಿನ ಮುರುಗಮಲ್ಲ ಹೋಬಳಿ ನಿಮ್ಮಕಾಯಲಹಳ್ಳಿಯಲ್ಲಿ ಬುಧವಾರ ನಡೆದಿದೆ.
ಗೌತಮ್ (3) ಕೊಲೆಯಾಗಿರುವ ಮಗು. ಮಗುವಿನ ಚಿಕ್ಕಪ್ಪ ರಂಜಿತ್ ಕುಮಾರ್ (31) ಕೊಲೆ ಆರೋಪಿ. ರಂಜಿತ್ ಅವರ ಅಣ್ಣನ ಮಗ ಗೌತಮ್. ಆರೋಪಿ ಡಿಪ್ಲೊಮೊ ಎಂಜಿನಿಯರ್ ಆಗಿದ್ದು ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.
ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ. ಬುಧವಾರ ಸಂಜೆ ಅವರ ಹಳೆ ಮನೆ ಬಳಿ ಆಟವಾಡುತ್ತಿದ್ದ ಗೌತಮ್ ನನ್ನು ರಂಜಿತ್ ಬ್ಲೇಡ್ನಿಂದ ಕುತ್ತಿಗೆ ಕೊಯ್ದು ಹಳೆ ಮನೆಯೊಳಗೆ ಹಾಕಿ ಪರಾರಿಯಾಗಿದ್ದಾನೆ.
ಸಂಜೆ ಕತ್ತಲಾದರೂ ಮಗು ಮನೆ ಬರದಿದ್ದಾಗ ಅನುಮಾನಗೊಂಡು ಪೋಷಕರುನ ಹುಡುಕಾಟ ನಡೆಸಿದ್ದಾರೆ. ಆಟವಾಡುತ್ತಿದ್ದದನ್ನು ನೋಡಿರುವ ನೆರೆಹೊರೆಯವರು, ಹಳೆ ಮನೆ ಬಳಿ ಚಿಕ್ಕಪ್ಪನೊಂದಿಗೆ ಇದ್ದ ವಿಷಯ ತಿಳಿಸಿದ್ದಾರೆ. ಮನೆ ಒಳಗಡೆ ಹೋಗಿ ನೋಡಿದಾಗ ಮಗು ಪತ್ತೆಯಾಗಿದೆ. ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಚಾರ್ಲಹಳ್ಳಿ ಠಾಣೆ ಇನ್ಸ್ಪೆಕ್ಟರ್ ವೆಂಕಟರವಣಪ್ಪ, ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಸ್ಪಿ ಡಿ.ಎಲ್.ನಾಗೇಶ್, ಡಿವೈಎಸ್ಪಿ ಮುರಳೀಧರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.