ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಭಾನುವಾರ ರಾತ್ರಿ ಹದ ಮಳೆ ಸುರಿದಿದ್ದು, ಕೃಷಿ ಚಟುವಟಿಕೆ ಆರಂಭವಾಗಿದೆ.
ಜಿಲ್ಲೆಯಲ್ಲಿ ಮೇ 1 ರಿಂದ 13 ರವರೆಗೆ ವಾಡಿಕೆಯಂತೆ 29 ಮಿಲಿ ಮೀಟರ್ ಮಳೆಯಾಗಬೇಕಾಗಿತ್ತು. 42 ಮಿಲಿ ಮೀಟರ್ ಮಳೆಯಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಹದ ಮಳೆಯಾಗುತ್ತಿದೆ. ಪೂರ್ವ ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಭಾನುವಾರ ಜಾಸ್ತಿ ಮಳೆಯಾಗಿದ್ದರಿಂದ ಸೋಮವಾರ ಹೊಲದಲ್ಲಿ ತೇವಾಂಶ ಹೆಚ್ಚಿತ್ತು. ಆದ್ದರಿಂದ ಕೃಷಿ ಚಟುವಟಿಕೆ ಆರಂಭವಾಗಲಿಲ್ಲ. ಸೋಮವಾರ ಮಳೆ ಬಾರದ ಕಾರಣ ಮಂಗಳವಾರ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿದ್ದಾರೆ. ಬಯಲು ಸೀಮೆಯ ಬಹುತೇಕ ಭಾಗದಲ್ಲಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಬೀಜ ರಸಗೊಬ್ಬರ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ ತಿಳಿಸಿದ್ದಾರೆ.
ಪೂರ್ವ ಮುಂಗಾರು ಬೆಳೆಗಳ ಬಿತ್ತನೆಗೆ ಅನುಕೂಲವಾಗುವಂತೆ ಒಟ್ಟ್ಟು 645 ಕ್ವಿಂಟಲ್ ಬಿತ್ತನೆ ಬೀಜಗಳನ್ನು ರೈತರ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಉದ್ದು- 4.65 ಕ್ವಿಂಟಾಲ್, ಹೆಸರು-34.60 ಕ್ವಿಂಟಾಲ್, ಅಲಸಂದೆ 100 ಕ್ವಿಂಟಾಲ್, ನೆಲಗಡಲೆ 492 ಕ್ವಿಂಟಾಲ್ ಮತ್ತು ಸೂರ್ಯಕಾಂತಿ 13.50 ಕ್ವಿಂಟಾಲ್ ದಾಸ್ತಾನಿದೆ. ರಿಯಾಯಿತಿ ದರದಲ್ಲಿ ವಿತರಣೆ ಪ್ರಗತಿಯಲ್ಲಿರುತ್ತದೆ ಎಂದು ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 98,300 ಹೆಕ್ಟರ್ ಬಿತ್ತನೆ ಗುರಿ ಇದ್ದು, ಪೂರ್ವ ಮುಂಗಾರು ಹಂಗಾಮಿಗೆ 10,350 ಹೆಕ್ಟರ್, ನೆಲಗಡಲೆ 2,300, ಹೆಸರು 1,900, ಹತ್ತಿ 1,500 ಹೆಕ್ಟರ್, ಹಲಸಂದೆ 1,150 ಹೆಕ್ಟರ್ ಮತ್ತು ಉದ್ದು 800 ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದ್ದಾರೆ.
ರಸಗೊಬ್ಬರ ದಾಸ್ತಾನು ಜಿಲ್ಲೆಯಲ್ಲಿ ಒಟ್ಟು 35073 ಟನ್ ವಿವಿಧ ರಸಗೊಬ್ಬರ ಬೇಡಿಕೆ ಇದೆ. ರಸಗೊಬ್ಬರ ಮಾರಾಟಗಾರರಲ್ಲಿ ಒಟ್ಟು 41151 ಟನ್ ಇದೆ. ಡಿಎಪಿ 3628 ಟನ್ ಕಾಂಪ್ಲೆಕ್ಸ್ 19578 ಎಂಒಪಿ 3031 ಟನ್ ಯೂರಿಯಾ 13981 ಟನ್ ಮತ್ತು ಎಸ್ಎಸ್ಪಿ 933 ಟನ್ ಸ್ತಾನಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.