ಮೂಡಿಗೆರೆ: ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದನ್ನು ಭಾರತ ಕಮ್ಯುನಿಸ್ಟ್ ಪಕ್ಷ ವಿರೋಧಿಸುತ್ತದೆ ಎಂದು ಸಿಪಿಐಎಂಎಲ್ ರಾಜ್ಯ ಘಟಕದ ಕಾರ್ಯದರ್ಶಿ ಬಿ. ರುದ್ರಯ್ಯ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ, ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಅಂಶಗಳನ್ನು ಹೊಂದಿರುವ ದೇಶ ಭಾರತ. ದೇಶದ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕಾದ ಸರ್ಕಾರ ಒಂದು ಧರ್ಮದ ವಕಾಲತ್ತು ವಹಿಸುವುದು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಈಗಾಗಲೇ ನಿರುದ್ಯೋಗ, ಹಸಿವು, ಬಡತನ, ರೈತ, ಕಾರ್ಮಿಕರ ಸಮಸ್ಯೆ, ದಲಿತ, ಆದಿವಾಸಿ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಬದುಕು ಹೀನಾಯವಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸದೆ ಜನರಿಂದ ಸಂಗ್ರಹಿಸಿದ್ದ ತೆರಿಗೆಯ ಸಾವಿರಾರು ಕೋಟಿ ಹಣವನ್ನು ಮಂದಿರ ಕಟ್ಟಲು ಬಳಸಿರುವುದು ಮಾನವ ಹಾಗೂ ಸಂವಿಧಾನಕ್ಕೆ ವಿರೋಧವಾಗಿದೆ’ ಎಂದು ಅವರು ದೂರಿದರು.
‘ದೇಶದಲ್ಲಿ ಲಾರಿ, ಟ್ಯಾಕ್ಸಿ ಚಾಲಕರ ವಿರೋಧಿ ಮಸೂದೆಯನ್ನು ಮಂಡಿಸುವ ಮೂಲಕ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಕಾರ್ಮಿಕ ವರ್ಗವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ ಲಾಭಕ್ಕಾಗಿ ಅಪೂರ್ಣಗೊಂಡಿರುವ ಶ್ರೀರಾಮ ಮಂದಿರವನ್ನು ತರಾತುರಿಯಲ್ಲಿ ಉದ್ಘಾಟಿಸಲಾಗಿದೆ. ಅಲ್ಲದೇ ಈ ಕಾರ್ಯಕ್ರಮವನ್ನು ದೇಶದ ಕಾರ್ಯಕ್ರಮವೆಂದು ಬಿಂಬಿಸುತ್ತಿರುವುದು ವಿಷಾದನೀಯ. ದೇಶದಲ್ಲಿ ಕೂಡಲೇ ಜಾತಿ ಗಣತಿ ಆರಂಭಿಸಬೇಕು. ಲಾರಿ ಟ್ರಕ್ ಚಾಲಕರ ಮಸೂದೆಯನ್ನು ರದ್ದುಪಡಿಸಬೇಕು’ ಎಂದು ಅವರು ಒತ್ತಾಯಿಸಿದರು. ತಹಶೀಲ್ದಾರ್ ತಿಪ್ಪೇಸ್ವಾಮಿ ಮೂಲಕ ಮನವಿ ಸಲ್ಲಿಸಲಾಯಿತು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್. ಶೇಖರ್, ರೈತ ಸಂಘದ ಅಧ್ಯಕ್ಷ ಶಂಕರ್, ಗೋಣಿಬೀಡು ಗ್ರಾಮ ಪಂಚಾಯಿತಿ ಸದಸ್ಯ ಬಿ. ಕೃಷ್ಣ, ವಿಠಲ್, ಮಂಜು, ಶೇಖರ್, ಸುರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.