ಕಡೂರು: ತಾಲ್ಲೂಕಿನ ಜಿಗಣೇಹಳ್ಳಿಯಲ್ಲಿ ಹೊಯ್ಸಳ ಇಮ್ಮಡಿ ವೀರಬಲ್ಲಾಳನ ಕಾಲದ ಅಪ್ರಕಟಿತ ದಾನ ಶಾಸನವೊಂದನ್ನು ಶಾಸನ ತಜ್ಞ ಹಿರೇನಲ್ಲೂರು ಪಾಂಡುರಂಗ ಸಂಶೋಧಿಸಿದ್ದಾರೆ.
ಸೂರ್ಯಗ್ರಹಣದ ದಿನ ನಕರದ ಹಳ್ಳಿಯ ಗೌತಮೇಶ್ವರ ದೇವರಿಗೆ ಅಂಗಭೋಗ, ರಂಗಭೋಗ ಸೇವೆಗಳು ಮತ್ತು ದೇವಾಲಯದ ಖಂಡಸ್ಫುಟಿತ ಜೀರ್ಣೋದ್ಧಾರದ ವೆಚ್ಚಕ್ಕಾಗಿ ಕೆರೆಯ ಕೆಳಗಿನ ಗದ್ದೆ ಮತ್ತು ದೇವಾಲಯದ ಮುಂದಿನ ಬೆದ್ದಲು ಭೂಮಿಯನ್ನು ದೇವಾಲಯದ ಸ್ಥಾನಿಕ ಯತಿಗಳಿಗೆ ನೀಡಿದ ವಿವರಗಳು ಶಾಸನದಲ್ಲಿವೆ. ಶಾಸನದಲ್ಲಿ ಸ್ಥಳೀಯ ವರ್ತಕನಾಗಿದ್ದಿರಬಹುದಾದ ಬೆಕ್ಕನಹಳ್ಳಿಯ ಮಾಚಿಸೆಟ್ಟಿ ಮತ್ತು ದೇವಾಲಯದ ಅರ್ಚಕರಾಗಿದ್ದಿರಬಹುದಾದ ಕಾಳಾಮುಖ ಪರಂಪರೆಯ ‘ಕಲ್ಲಜೀಯರು’ ಹೆಸರುಗಳು ಉಲ್ಲೇಖವಾಗಿದೆ ಎಂದು ಅವರು ತಿಳಿಸಿದ್ದಾರೆ.
1202ನೇ ಸಾಲಿನ ಶಾಸನ ಇದಾಗಿದ್ದು, ಹೊಯ್ಸಳ ಇತಿಹಾಸದ ಪ್ರಮುಖ ಶಾಸನವಾಗಿದೆ. ಸಂಶೋಧನೆಗೆ ಮಾರ್ಗದರ್ಶನ ನೀಡುತ್ತಿರುವ ಶಾಸನ ತಜ್ಞ ಎಚ್.ಎಂ.ನಾಗರಾಜರಾವ್ ಅವರಿಗೆ ಪಾಂಡುರಂಗ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಸ್ತುತ ಈ ಶಾಸನವನ್ನು ಗ್ರಾಮದ ಶಾಲಾವರಣದಲ್ಲಿ ರಕ್ಷಿಸಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.