ಕೊಟ್ಟಿಗೆಹಾರ: ಅಕ್ರಮವಾಗಿ ಹೋರಿ ಮತ್ತು ಹಸುಗಳನ್ನು ಸಾಗಿಸುತ್ತಿದ್ದರು ಎಂಬ ಆರೋಪದ ಮೇಲೆ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದ ಅಶ್ವಥ್ ಮತ್ತು ಸಚಿನ್ ಎಂಬವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೊಟ್ಟಿಗೆಹಾರದಿಂದ ವಿಟ್ಲ ತಾಲ್ಲೂಕಿನ ಸಾಲೆತ್ತೂರಿಗೆ ಸಾಗಿಸುತ್ತಿದ್ದರು ಎನ್ನಲಾದ ಮೂರು ಹೋರಿ ಮತ್ತು ಒಂದು ಹಸುವನ್ನು ಗುರುವಾಯನಕೆರೆ ಹಾಗೂ ವಿಟ್ಲ ತಾಲ್ಲೂಕಿನ ಹಿಂದೂ ಸಂಘಟನೆ ಕಾರ್ಯಕರ್ತರು ರಕ್ಷಣೆ ಮಾಡಿ ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಂದ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ: ಮುಖಂಡರ ಸ್ಪಷ್ಟನೆ
ಗೋ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳು ಬಜರಂಗದಳ ಸಂಘಟನೆಗೆ ಸೇರಿರುವವರು ಎನ್ನುವ ಪೋಸ್ಟ್ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಬಣಕಲ್ ಠಾಣೆಗೆ ದೂರು ನೀಡಿರುವ ಬಜರಂಗದಳದ ಸಂಯೋಜಕರು, ಆರೋಪಿಗಳಿಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ, ತಪ್ಪು ಮಾಹಿತಿ ಪ್ರಚಾರ ಮಾಡುತ್ತಿರುವವರ ಮತ್ತು ಸಂಘಟನೆಯ ಹೆಸರನ್ನು ಬಳಸಿಕೊಂಡು ಗೋ ಸಾಗಾಟ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಬಜರಂಗದಳದ ಸಂಯೋಜಕ ಅಭಿಷೇಕ್, ಬಜರಂಗದಳ ಮುಖಂಡ ವಿನಯ್ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.