ADVERTISEMENT

ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ ದುಬಾರಿ

ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ; ತಗ್ಗಿದ ಪೂರೈಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 5:07 IST
Last Updated 4 ಅಕ್ಟೋಬರ್ 2024, 5:07 IST

ಕಡೂರು:ಮಾರುಕಟ್ಟೆಯಲ್ಲಿ ನಿತ್ಯ ಬಳಕೆಯ ಈರುಳ್ಳಿ, ಬೆಳ್ಳುಳ್ಳಿ ಜತೆಗೆ ತೆಂಗಿನಕಾಯಿ ಬೆಲೆಯೂ ಏರುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ಜೋರಾಗಿಯೇ ತಟ್ಟುತ್ತಿದೆ.

ಒಂದು ತಿಂಗಳಿಂದ ತೆಂಗಿನ ಕಾಯಿ ಬೆಲೆ ಏರುಮುಖವಾಗಿದೆ. ಕಡೂರು ಎಪಿಎಂಸಿಯಲ್ಲಿ  ವಾರದಿಂದೀಚೆಗೆ 1 ಸಾವಿರ ತೆಂಗಿನ ಕಾಯಿಗೆ ಸರಾಸರಿ ₹20 ರಿಂದ ₹ 23 ಸಾವಿರಕ್ಕೆ  ಮಾರಾಟವಾಗುತ್ತಿದೆ. ಉತ್ತಮ ಧಾರಣೆ ಇದ್ದರೂ, ಇಳುವರಿ ಕಡಿಮೆ ಇರುವುದರಿಂದ ಮಾರುಕಟ್ಟೆಗೆ ಬರುತ್ತಿರುವ ತೆಂಗಿನ ಕಾಯಿ ಪ್ರಮಾಣ ಕಡಿಮೆ ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ದೊಡ್ಡ ತೆಂಗಿನಕಾಯಿ ಒಂದಕ್ಕೆ ₹30, ಮಧ್ಯಮ ₹25, ಸಣ್ಣ ಕಾಯಿ ₹18 ದರದಲ್ಲಿ ಮಾರಾಟವಾಗುತ್ತಿದೆ.

ತೆಂಗಿನಕಾಯಿಗಿಂತಲೂ ಎಳನೀರು‌ ಮಾರಾಟಕ್ಕೆ ರೈತರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಪ್ರತಿನಿತ್ಯ ಕನಿಷ್ಠ 20 ಸಾವಿರ ಎಳನೀರು ಎಪಿಎಂಸಿಗೆ ಬರುತ್ತಿದೆ. 1 ಸಾವಿರ ಎಳನೀರಿಗೆ ₹15 ರಿಂದ ₹20 ಸಾವಿರ ನೀಡಿ ವ್ಯಾಪಾರಿಗಳು ಖರೀದಿಸುತ್ತಾರೆ. ಒಂದು ತಿಂಗಳಿಗೆ ಸರಾಸರಿ 5ರಿಂದ 6 ಲಕ್ಷ ಎಳನೀರು ಮಾರಾಟವಾಗುತ್ತಿವೆ. ಕಡೂರಿನಿಂದ ಎಳನೀರು ಮುಂಬೈ, ದೆಹಲಿ, ಪುಣೆಗೆ ರವಾನೆಯಾಗುತ್ತದೆ. ತೆಂಗಿನ ಕಾಯಿಗಿಂತಲೂ ಎಳನೀರು ಮಾರಾಟವೇ ಹೆಚ್ಚು ಲಾಭಕರ ಎನ್ನುವುದು ಈ ಭಾಗದ ತೆಂಗು ಬೆಳೆಗಾರರ ಅಭಿಪ್ರಾಯ.

ADVERTISEMENT

ಈರುಳ್ಳಿ ಬೆಲೆ ಕೂಡ ಕಣ್ಣೀರು ತರಿಸಲು ಆರಂಭಿಸಿದೆ. ಸದ್ಯ 1 ಕೆಜಿಗೆ ಸರಾಸರಿ ₹40 ದರ ಇದೆ. ಸ್ಥಳೀಯವಾಗಿ ಪೂರೈಕೆ ಕಡಿಮೆ ಇದೆ. ನಾಸಿಕ್, ಪೂನಾದಿಂದ ಈರುಳ್ಳಿ ಬರಲು ಆರಂಭಿಸಿದರೆ ಬೆಲೆ ಕಡಿಮೆಯಾಗಬಹುದು ಎನ್ನುತ್ತಾರೆ ವ್ಯಾಪಾರಿಗಳು. ಸದ್ಯ ಹತ್ತು ಕೆ.ಜಿ ತೂಕದ ಈರುಳ್ಳಿ ಚೀಲಕ್ಕೆ ₹350 ರಿಂದ ₹400 ಬೆಲೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.