ಕೊಟ್ಟಿಗೆಹಾರ: ಬಣಕಲ್ ಹೋಬಳಿಯ ಸಬ್ಲಿ ಗ್ರಾಮದ ಮಾಜಿ ಯೋಧ ಲಕ್ಷ್ಮಣ್ ಅವರ ಮನೆ ಬಳಿ ಗುಡ್ಡ ಕುಸಿತ, ಪ್ರವಾಹದ ಬಗ್ಗೆ ಅಣಕು ಪ್ರದರ್ಶನ ಕಾರ್ಯಕ್ರಮ ನಡೆಸಲಾಯಿತು.
ಶೌರ್ಯ ವಿಪತ್ತು ತಂಡವು ಮಲೆನಾಡಿನ ಮಳೆಗಾಲದ ಪರಿಸ್ಥಿತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರದ ವಿಪತ್ತು ಪ್ರಾಧಿಕಾರ (ಎನ್.ಡಿ.ಆರ್.ಎಫ್), ಧರ್ಮಸ್ಥಳ ಗ್ರಾಮಾಭಿವೃದ್ಧಿ ವಿಪತ್ತು ನಿರ್ವಹಣೆ ಘಟಕ ವತಿಯಿಂದ ಕಾರ್ಯಕ್ರಮ ಜರುಗಿತು.
ಮೂಡಿಗೆರೆ ತಹಶೀಲ್ದಾರ್ ಶೈಲೇಶ್ಎಸ್ ಪರಮಾನಂದ ಮಾತನಾಡಿ, ‘ಮಲೆನಾಡು ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಪ್ರವಾಹ, ಭೂಕುಸಿತಗಳು ಉಂಟಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ಅಣುಕು ಪ್ರದರ್ಶನದ ಮೂಲಕ ತುರ್ತು ಪರಿಸ್ಥಿತಿ ನಿಭಾಯಿಸಲು ಯುವಕರಿಗೆ ತರಬೇತಿ ನೀಡಲಾಗುತ್ತಿದೆ. ಸರ್ವರ ಸಹಕಾರವಿದ್ದರೆ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ’ ಎಂದರು.
ಮೂಡಿಗೆರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಿವಾನಂದ ಮಾತನಾಡಿ, ‘ಸರ್ಕಾರವೇ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಸಂಘ–ಸಂಸ್ಥೆಗಳು, ಸ್ಥಳೀಯರು, ಅಧಿಕಾರಿ ವರ್ಗದವರ ಸಹಕಾರದಿಂದ ಮಾತ್ರ ವಿಪತ್ತು ನಿರ್ವಹಣೆ ತಡೆಯಲು ಸಾಧ್ಯವಿದೆ’ ಎಂದರು.
ಗುಡ್ಡ ಕುಸಿತ ಸ್ಥಳದಲ್ಲಿ ಸಿಲುಕಿರುವವರನ್ನು ಉಳಿಸಲು ಹಗ್ಗ ಕಟ್ಟಿ ಅದರ ಸಹಾಯದಿಂದ ರಕ್ಷಿಸುವ ಅಣುಕು ಪ್ರದರ್ಶನ ನಡೆಯಿತು. ಚಿತ್ರದುರ್ಗ ಪ್ರಾದೇಶಿಕ ಜನ ಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್, ಬೆಳ್ತಂಗಡಿ ವಿಪತ್ತು ನಿರ್ವಹಣಾ ಘಟಕದ ಯೋಜನಾಧಿಕಾರಿ ಕಿಶೋರ್, ಬಣಕಲ್ ವಲಯ ಮೇಲ್ವಿಚಾರಕ ಸಂದೀಪ್, ಪೋಲಿಸ್ ಸಬ್ ಇನ್ಸ್ಪೆಕ್ಟರ್ ಕೌಶಿಕ್, ಶೌರ್ಯ ವಿಪತ್ತು ನಿರ್ವಣ ಘಟಕದ ಮಾಸ್ಟರ್ ಪ್ರವೀಣ್ ಪೂಜಾರಿ, ಕ್ಯಾಪ್ಟನ್ ಕೆ.ಎಲ್.ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.