ADVERTISEMENT

ಜೆಜೆಎಂ ಕಾಮಗಾರಿ: ಕಳಪೆಯಾಗಿದ್ದರೆ ತನಿಖೆ

ದಿಶಾ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 18:14 IST
Last Updated 16 ಅಕ್ಟೋಬರ್ 2024, 18:14 IST

ಚಿಕ್ಕಮಗಳೂರು: ಮನೆ– ಮನೆಗೆ ನೀರು ಪೂರೈಸುವ ಜಲಜೀವನ ಮಿಷನ್(ಜೆಜೆಎಂ) ಯೋಜನೆ ಕಾಮಗಾರಿ ಬಗ್ಗೆ ಸಾಕಷ್ಟು ಆರೋಪಗಳಿದ್ದು, ಕಾಮಗಾರಿ ಕಳಪೆಯಾಗಿದ್ದರೆ ತನಿಖೆಗೆ ಶಿಫಾರಸು ಮಾಡಲಾಗವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ದಿಶಾ(ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಜಲಜೀವನ ಮಿಷನ್ ಕಾಮಗಾರಿಯಲ್ಲಿ ಟ್ಯಾಂಕ್ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ ಸೇರಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಎಲ್ಲೆಡೆ ದೂರುತ್ತಿದ್ದಾರೆ. ಈ ವಿಷಯದ ಕುರಿತು ಸಮಗ್ರವಾಗಿ ಚರ್ಚಿಸಲು ಅ. 23ರಂದು ವಿಶೇಷ ಸಭೆ ನಡೆಸಲಾಗುವುದು. ಈ ವೇಳೆ ಎಲ್ಲಾ ಮಾಹಿತಿಯನ್ನೂ ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿಗಳು ತರಬೇಕು ಎಂದರು.

ADVERTISEMENT

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಕೊಳ್ಳುವ ಮುನ್ನ ಅಭಿವೃದ್ಧಿ ಅಧಿಕಾರಿಗಳು ಗುಣಮಟ್ಟ ಪರಿಶೀಲನೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಈ ಯೋಜನೆ ಕಾಮಗಾರಿ ಅನುಷ್ಠಾನದಲ್ಲಿ ಸಾಕಷ್ಟು ಲೋಪಗಳಾಗಿವೆ. ಕಾಮಗಾರಿ ಮುಗಿದಿದ್ದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ನೀರಿನ ಮೂಲವನ್ನೇ ಗುರುತಿಸದೆ ಪೈಪ್ ಅಳವಡಿಕೆ ಮಾಡಿ ಬಿಡಲಾಗಿದೆ. ಈಗ ನೀರಿನ ಮೂಲದ ಹುಡುಕಾಟ ನಡೆಯುತ್ತಿದೆ. ಗುತ್ತಿಗೆದಾರರಿಗೆ ಉದ್ಯೋಗ ಖಾತ್ರಿ ಮಾಡುವ ಯೋಜನೆ ಎಂಬಂತಾಗಿದೆ’ ಎಂದರು.

‘ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದಗುತ್ತಿ ಗ್ರಾಮದಲ್ಲಿ ಇದೇ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಲು ಮನೆ–ಮನೆಯಿಂದ ₹1,500 ಸಂಗ್ರಹ ಮಾಡಲಾಗಿದೆ. ಜನರಿಂದ ಹಣ ಪಡೆದು ನೀರಿನ ಸಂಪರ್ಕ ಕಲ್ಪಿಸಲು ಅವಕಾಶ ಇದೆಯೇ’ ಎಂದು ಪ್ರಶ್ನಿಸಿದರು.

ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ತನಿಖೆ ನಡೆಸಿ ಜನರಿಗೆ ಹಣ ವಾಪಸ್ ಕೊಡಿಸಬೇಕು. ಅಧಿಕಾರಿಗಳು ಜನರ ಕೆಲಸ ಮಾಡುವತ್ತ ಗಮನ ಹರಿಸಬೇಕು. ಯಾವುದನ್ನೂ ಪರಿಶೀಲನೆ ನಡೆಸದೆ ಬಿಲ್‌ಗಳಿಗೆ ಸಹಿ ಹಾಕಿದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಇದ್ದರು.

ಬೇಲೂರು–ಚಿಕ್ಕಮಗಳೂರು: ಡಿಪಿಆರ್‌ ಸಲ್ಲಿಸಲು ಸೂಚನೆ

‘ಬೇಲೂರು–ಚಿಕ್ಕಮಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನಾ ವರದಿಯನ್ನು ಕೂಡಲೇ ಸಲ್ಲಿಸಿ’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಡಿಪಿಆರ್‌ ತಯಾರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಜಯಣ್ಣ ಸಭೆಗೆ ಮಾಹಿತಿ ನೀಡಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ‘ಡಿಪಿಆರ್ ಸಲ್ಲಿಕೆ ವಿಳಂಬವಾಗಿದ್ದರಿಂದ ಪ್ರಸಕ್ತ ಸಾಲಿನ ಯೋಜನೆಗಳ ಪಟ್ಟಿಯಿಂದ ಹೊರಗುಳಿದಿದೆ. ಕೂಡಲೇ ಯೋಜನಾ ವರದಿ ಸಲ್ಲಿಸಿದರೆ ಮುಂದಿನ ಸಾಲಿನ ಪಟ್ಟಿಯಲ್ಲಾದರೂ ಸೇರಿಸಲು ಅವಕಾಶ ಆಗಲಿದೆ’ ಎಂದರು.

‘ಡಿಪಿಆರ್ ಸಲ್ಲಿಸಿ ಮಾಹಿತಿ ನೀಡಿದರೆ ಸಂಸದರೊಂದಿಗೆ ದೆಹಲಿಗೆ ಹೋಗಿ ಯೋಜನೆಗೆ ಮಂಜೂರಾತಿ ಕೊಡಿಸುವುದು ನಮ್ಮ ಜವಾಬ್ದಾರಿ’ ಎಂದು ಸಿ.ಟಿ.ರವಿ ಹೇಳಿದರು.

‘ಕಡೂರು–ಚಿಕ್ಕಮಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಭೂಮಿ ನೀಡಿದ ರೈತರಿಗೆ ಇನ್ನೂ ಪರಿಹಾರ ಬಂದಿಲ್ಲ. ಕೂಡಲೇ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಬೇಕು. ಇನ್ನೂ 10 ದಿನಗಳಲ್ಲಿ ಪರಿಹಾರ ನೀಡಲು ಕ್ರಮ ವಹಿಸಬೇಕು’ ಎಂದು ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಮೂಗ್ತಿಹಳ್ಳಿ–ಮೂಡಿಗೆರೆ: ಕಾಮಗಾರಿ ಶೀಘ್ರ ಆರಂಭ

ಚಿಕ್ಕಮಗಳೂರು ನಗರದ ಹೊರವಲಯದ ಮೂಗ್ತಿಹಳ್ಳಿಯಿಂದ ಮೂಡಿಗೆರೆ ತನಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಹೆದ್ದಾರಿ ವಿಭಾಗದ ಎಂಜಿನಿಯರ್ ಜಯಣ್ಣ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ‘ಭೂಸ್ವಾಧೀನ ಸಂದರ್ಭದಲ್ಲಿ ರೈತರೊಂದಿಗೆ ಸಭೆಗಳನ್ನು ನಡೆಸಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕು. ಸಭೆಗೆ ಜನಪ್ರತಿನಿಧಿಗಳನ್ನು ಕರೆದರೆ ರೈತರ ಮನವೊಲಿಕೆ ಸುಲಭವಾಗಲಿದೆ. ಇಲ್ಲದಿದ್ದರೆ ಯೋಜನೆ ಅನುಷ್ಠಾನ ವಿಳಂಬವಾಗಲಿದೆ’ ಎಂದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ ‘ರಸ್ತೆ ಬದಿಯಲ್ಲಿ ಅಂಗಡಿ–ಮುಂಗಟ್ಟುಗಳಿವೆ. ಅವರಿಗೂ ಸೂಕ್ತ ಪರಿಹಾರ ದೊರಕುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಮುಂದಿನ ಮಳೆಗಾಲ ಆರಂಭಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.