ADVERTISEMENT

ಕಡೂರು | ರೋಟರಿಯಿಂದ ವಿದ್ಯುತ್ ಚಿತಾಗಾರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 14:18 IST
Last Updated 14 ಜನವರಿ 2024, 14:18 IST
ಕಡೂರಿನಲ್ಲಿ ರೋಟರಿ ಕ್ಲಬ್ ಸದಸ್ಯರು ಚಿತಾಗಾರ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು
ಕಡೂರಿನಲ್ಲಿ ರೋಟರಿ ಕ್ಲಬ್ ಸದಸ್ಯರು ಚಿತಾಗಾರ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು    

ಕಡೂರು: ‘ಪಟ್ಟಣದ ಚಂದ್ರಮೌಳೀಶ್ವರ ದೇವಸ್ಥಾನದ ಬಳಿಯಿರುವ ಸ್ಮಶಾನದಲ್ಲಿ ₹65 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಚಿತಾಗಾರ ನಿರ್ಮಾಣಕ್ಕೆ ಜ.16 ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಹೇಳಿದರು.

ಕಡೂರಿನ ರೋಟರಿ ಸಭಾಂಗಣದಲ್ಲಿ ಮಾಹಿತಿ ನೀಡಿದ ಅವರು, ‘ಕಡೂರು ಪಟ್ಟಣದಲ್ಲಿ ಚಿತಾಗಾರ ಇದ್ದರೂ ಅಲ್ಲಿ ವಿದ್ಯುತ್ ಅಥವಾ ಗ್ಯಾಸ ಮೂಲಕ ಮೃತದೇಹ ದಹನ ಮಾಡುವಂತಹ ಸೌಲಭ್ಯವಿದ್ದರೆ ಅನುಕೂಲಕರ ಎಂಬ ಅಂಶವನ್ನು ಮನಗಂಡು,  ರೊಟರಿ ಕ್ಲಬ್ ಚಿತಾಗಾರ ಘಟಕವನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಒಂದು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಶಾಸಕ ಕೆ.ಎಸ್.ಆನಂದ್ ಗೌರವ ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಪಟ್ಟಣದ ಪ್ರಮುಖರು ಇರುತ್ತಾರೆ. ಸರ್ವಜನರ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಸಜ್ಜಿತವಾದ ಚಿತಾಗಾರ ನಿರ್ಮಾಣಗೊಳ್ಳಲಿದೆ’ ಎಂದರು.

ರೋಟರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಶಿವಕುಮಾರ್ ಮಾತನಾಡಿ, ‘ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿರುವ ರೋಟರಿ ಸಂಸ್ಥೆಯು ಈ ಮಹತ್ಕಾರ್ಯವನ್ನು ಮಾಡುತ್ತಿದೆ. ಈ ಚಿತಾಗಾರವನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ನಿರ್ಮಾಣ ಕಾರ್ಯ ಮುಗಿದ ನಂತರ ಹೊಸ ನಿರ್ವಹಣಾ ಸಮಿತಿ ರಚಿಸಿ ಅದರ ಮೂಲಕ ಚಿತಾಗಾರದ ಜವಾಬ್ದಾರಿ ನಿರ್ವಹಿಸಲಾಗುತ್ತದೆ’ ಎಂದರು.

ADVERTISEMENT

ನಿಕಟಪೂರ್ವ ಅಧ್ಯಕ್ಷ ಮಂಜುನಾಥ್, ಕೆ.ಎಚ್.ಎ.ಪ್ರಸನ್ನ, ಕಾರ್ಯದರ್ಶಿ ಸವಿತಾ ಸತ್ಯನಾರಾಯಣ, ಕೃಷ್ಣಸ್ವಾಮಿ, ಕಲ್ಲೇಶಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.