ADVERTISEMENT

ಮಾನವ– ಕಾಡಾನೆ ಸಂಘರ್ಷ ತಡೆಯಲು ಕ್ರಮ; ತನೂಡಿ ಬಳಿ ಆನೆ ಶಿಬಿರಕ್ಕೆ ಜಾಗ ಗುರುತು

ಸ್ಥಳ ಅಂತಿಮಗೊಳಿಸಿದ ತಜ್ಞರ ತಂಡ

ವಿಜಯಕುಮಾರ್ ಎಸ್.ಕೆ.
Published 22 ಅಕ್ಟೋಬರ್ 2024, 6:56 IST
Last Updated 22 ಅಕ್ಟೋಬರ್ 2024, 6:56 IST
ಆನೆ
ಆನೆ   

ಚಿಕ್ಕಮಗಳೂರು: ಮಾನವ– ಕಾಡಾನೆ ಸಂಘರ್ಷ ತಡೆಯಲು ಮತ್ತೊಂದು ಆನೆ ಶಿಬಿರ ತಲೆ ಎತ್ತಲಿದ್ದು, ಬಾಳೆಹೊನ್ನೂರು– ಕಳಸ ನಡುವಿನ ತನೂಡಿ ಸಮೀಪ ಜಾಗ ಅಂತಿಮಗೊಳಿಸಿದೆ.

ಬಂಡೀಪುರ, ಶಿವಮೊಗ್ಗದ ಸಕ್ರೆಬೈಲು, ಕೊಡಗಿನ ದುಬಾರೆಯಲ್ಲಿ ಆನೆ ಶಿಬಿರಗಳಿವೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆಗಳು ಮತ್ತು ಮಾನವ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಉಟಪಳ ನೀಡುವ ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಈಗ ದೂರದ ಆನೆ ಬಿಡಾರಗಳಿಂದ ಸಾಕಾನೆಗಳನ್ನು ಕರೆಸಬೇಕಿದೆ.

ಮೂಡಿಗೆರೆ ಮತ್ತು ಆಲ್ದೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ತುರ್ತು ಸಂದರ್ಭದಲ್ಲಿ ‌ಕಾರ್ಯಾಚರಣೆಗೆ ಸಾಕಾನೆಗಳ ನೆರವು ಬೇಕಿದ್ದರೆ ರಾಜ್ಯ ಮಟ್ಟದ ಅಧಿಕಾರಿಗಳ ಮೂಲಕ ಆನೆ ಶಿಬಿರಗಳನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಜಿಲ್ಲೆಯಲ್ಲೇ ಆನೆ ಬಿಡಾರ ತೆರೆಯಲು ಸರ್ಕಾರ ಚಿಂತಿಸಿದೆ. ಆನೆ ಬಿಡಾರಕ್ಕೆ ಸ್ಥಳ ಗುರುತಿಸುವಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಚಿಕ್ಕಮಗಳೂರು ಅರಣ್ಯ ವೃತ್ತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ADVERTISEMENT

ಅದರಂತೆ ತಜ್ಞರ ತಂಡ ರಚಿಸಲಾಗಿತ್ತು. ಆ ತಂಡ ಎಂಟು ಸ್ಥಳಗಳನ್ನು ಗುರುತು ಮಾಡಿತ್ತು. ಅವುಗಳಲ್ಲಿ ಪ್ರಮುಖ ಮೂರು ಸ್ಥಳಗಳನ್ನು ತಂಡ ಶಿಫಾರಸು ಮಾಡಿತ್ತು. ಬಾಳೆಹೊನ್ನೂರು, ಮುತ್ತೋಡಿ ಅರಣ್ಯದಲ್ಲಿ ಎರಡು ಕಡೆ ಆನೆ ಶಿಬಿರಕ್ಕೆ ಸೂಕ್ತವಾದ ಜಾಗ ಇದೆ ಎಂದು ಗುರುತಿಸಿತ್ತು. 

ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು ತಜ್ಞರ ತಂಡವು ಸೆಪ್ಟೆಂಬರ್‌ನಲ್ಲಿ ಮೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಬಾಳೆಹೊನ್ನೂರು ಸಮೀಪದ ಹಲಸೂರು ಅರಣ್ಯ ವಿಭಾಗದ ತನೂಡಿ ಬಳಿಯ ಜಾಗ ಸೂಕ್ತವಾಗಿದೆ ಎಂದು ನಿರ್ಧರಿಸಿದೆ.

ನೀರು ನಿರಂತರವಾಗಿ ಹರಿಯುವ ಸ್ಥಳ ಆಗಿರಬೇಕು, ಆನೆಗಳಿಗೆ ಆಹಾರ ಹತ್ತಿರದಲ್ಲಿ ಸಿಗುವಂತಿರಬೇಕು. ಲಾರಿಗಳ ಸಂಚಾರಕ್ಕೆ ಅನುಕೂಲ ಇರಬೇಕು. ಈ ಎಲ್ಲಾ ಅಂಶಗಳನ್ನು ಒಳಗೊಂಡ ಸ್ಥಳ ಇದು ಎಂದು ಗುರುತಿಸಲಾಗಿದೆ. ತಜ್ಞರ ತಂಡ ಕೂಡ ಇದೇ ಜಾಗಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಆನೆ ಶಿಬಿರ ಸ್ಥಾಪನೆಗೆ ಬೇಕಿರುವ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆಯಾಗಿದೆ. ಅನುದಾನ ಬಿಡುಗಡೆಯಾದರೆ ಜಿಲ್ಲೆಯಲ್ಲಿ ಆನೆ ಶಿಬಿರವೊಂದು ಶೀಘ್ರವೇ ತಲೆ ಎತ್ತಲಿದೆ.

ಪ್ರವಾಸೋದ್ಯಮಕ್ಕೂ ಅನುಕೂಲ’ ‘ಆನೆ ಮತ್ತು ಮಾನವ ಸಂಘರ್ಷ ತಡೆಯುವುದು ಮುಖ್ಯ ಉದ್ದೇಶವಾದರೂ ಪ್ರವಾಸೋದ್ಯಮಕ್ಕೂ ಅನುಕೂಲ ಆಗಲಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ಭದ್ರಾ ನದಿ ಪಕ್ಕದಲ್ಲಿ ಈ ಶಿಬಿರ ತಲೆ ಎತ್ತಲಿದೆ. ಪಕ್ಕದಲ್ಲೆ ಅರಣ್ಯ ಇರುವುದರಿಂದ ಆನೆಗಳ ಆಹಾರಕ್ಕೆ ತೊಂದರೆ ಇಲ್ಲ. ಈ ಭಾಗದಲ್ಲೊಂದು ಪ್ರವಾಸ ತಾಣವೂ ಸೃಷ್ಟಿಯಾಗಲಿದೆ. ಚಿಕ್ಕಮಗಳೂರು ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಅನುಕೂಲ ಆಗಲಿದೆ. ಆದ್ದರಿಂದ ಎರಡು ಉದ್ದೇಶಗಳೂ ಈಡೇರಲಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.