ಚಿಕ್ಕಮಗಳೂರು: ನಗರದ ಸಮೀಪಕ್ಕೆ 24 ಕಾಡಾನೆಗಳ ಹಿಂಡು ದಾಂಗುಡಿ ಇಟ್ಟಿದ್ದು, ಸುತ್ತಮುತ್ತಲ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ತಾಲ್ಲೂಕಿನ ಕೆ.ಆರ್.ಪೇಟೆ ಮತ್ತು ಮಾವಿನಕೆರೆ ಭಾಗದಲ್ಲಿ ಶನಿವಾರ ಕಾಣಿಸಿಕೊಂಡಿದ್ದ ಈ ಆನೆಗಳು, ಸೋಮವಾರ ಬೆಳಿಗ್ಗೆ ನಗರದ ಹೊರ ವಲಯದ ಅಂಬರ್ ವ್ಯಾಲಿ ಶಾಲೆಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶಕ್ಕೆ ಬಂದಿವೆ.
ಸಮೀಪವೇ ಇರುವ ಕದ್ರಿಮಿದ್ರಿ ಬಳಿ ಕೇಂದ್ರೀಯ ವಿದ್ಯಾಲಯ ಹಾಗೂ ವೈದ್ಯಕೀಯ ಕಾಲೇಜು ಸೇರಿ ಹಲವು ಖಾಸಗಿ ಶಾಲೆ ಮತ್ತು ಕಾಲೇಜುಗಳಿವೆ. ಸಮೀಪದ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳೂ ಇದ್ದು, ಸೋಮವಾರ ಬೆಳಿಗ್ಗೆಯೇ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿತ್ತು. ಸುತ್ತಮುತ್ತಲ ಪ್ರದೇಶಗಳಲ್ಲಿ ಸೆಕ್ಷನ್ 144 ಪ್ರಕಾರ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಾಡಿನಲ್ಲಿದ್ದ 30 ಆನೆಗಳ ಹಿಂಡಿನಲ್ಲಿ 24 ಆನೆಗಳು ಚಿಕ್ಕಮಗಳೂರು ತಾಲ್ಲೂಕಿನತ್ತ ಶನಿವಾರ ಬಂದಿವೆ. ರೇಡಿಯೊ ಕಾಲರ್ ಅಳವಡಿಸಿರುವ ‘ಬೀಟಮ್ಮ’ ಎಂಬ ಹೆಣ್ಣಾನೆಯನ್ನು ಈ ಹಿಂಡಿನಲ್ಲಿರುವ ಇತರ ಆನೆಗಳು ಹಿಂಬಾಲಿಸುತ್ತಿವೆ. ಅವುಗಳ ಚಲನ ವಲನದ ಮೇಲೆ ನಿಗಾ ಇರಿಸಲಾಗಿದೆ. ದುಬಾರೆ ಮತ್ತು ನಾಗರಹೊಳೆ ಆನೆ ಶಿಬಿರದಿಂದ ಒಟ್ಟು ಎಂಟು ಸಾಕಾನೆಗಳನ್ನು ಕರೆತಂದು ಆನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.