ಆಲ್ದೂರು: ಸುತ್ತಲಿನ ಹೋಬಳಿಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ತೇವಾಂಶ ಹೆಚ್ಚಳದಿಂದ ಕಾಫಿ ಬೆಳೆ ನೆಲಕ್ಕುದುರುತ್ತಿದೆ. ಆಲ್ದೂರು, ಆವತಿ, ವಸ್ತಾರೆ ಭಾಗಗಳಲ್ಲಿ ಈಗಾಗಲೇ 55.65 ಇಂಚಿನಷ್ಟು (141 ಸೆಂ.ಮೀ) ಮಳೆಯಾಗಿದ್ದು, ಕಾಫಿ ಬೆಳೆಗಾರರ ಆತಂಕ ಹೆಚ್ಚಾಗಿದೆ.
‘ಕೊಳೆರೋಗ, ಎಲೆಚುಕ್ಕಿ ರೋಗ, ವ್ಯಾಪಕವಾಗಿ ಹರಡುತ್ತಿದ್ದು, ಮಳೆ ಬಿಡುವು ನೀಡಿ ಮಧ್ಯೆ ಬಿಸಿಲು ಬಂದರೆ ಹಳದಿ ರೋಗವೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಕರ್ನಾಟಕ ಬೆಳೆಗಾರರ ಸಂಘದ ನಿರ್ದೇಶಕ ಅಶೋಕ್ ಸೂರಪ್ಪನಹಳ್ಳಿ ಹೇಳಿದರು.
‘ಈ ವರ್ಷ ರೋಬಸ್ಟ ಕಾಫಿ ಫಸಲು ಕಡಿಮೆ ಇದ್ದು, ರಭಸದ ಗಾಳಿ ಮಳೆಗೆ ಕಾಫಿ ಕಾಯಿಗಳು ಉದುರುತ್ತಿವೆ. ತೋಟಗಳಲ್ಲಿರುವ ಮರದ ಕೊಂಬೆಗಳು ಮುರಿದು ಕಾಫಿ ಗಿಡಗಳ ಮೇಲೆ ಬಿದ್ದು ಹಾನಿಯಾಗುತ್ತಿದೆ’ ಎಂದು ಆವತಿ ಹೋಬಳಿ ಕಾಫಿ ಬೆಳೆಗಾರ ಕೆರೆಮಕ್ಕಿ ಮಹೇಶ್ ಹೇಳಿದರು.
ಈಗಾಗಲೇ ಶೇ 25ರಷ್ಟು ರೋಬಸ್ಟ ಕಾಫಿ ಫಸಲು ನೆಲಕ್ಕೆ ಉದುರಿದೆ. ತೇವಾಂಶ ಹೆಚ್ಚಳದಿಂದ ಅರೇಬಿಕಾ ಕಾಫಿ ತಳಿ ಕೂಡ ನಷ್ಟದ ಹಾದಿ ಹಿಡಿದಿದೆ. ಕಾಫಿ ಮಂಡಳಿ ಮತ್ತು ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು. ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು’ ಎಂದು ಆಲ್ದೂರು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ ಸುರೇಶ್ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.