ಎನ್.ಆರ್.ಪುರ (ಚಿಕ್ಕಮಗಳೂರು): ಜೋರು ಗಾಳಿ ಸಹಿತ ಸುರಿದ ಮಳೆಗೆ ಕಾನೂರು–ಕಟ್ಟಿಮನೆ ಗ್ರಾಮದ ಬಳಿ ಮರಗಳು ಉರುಳಿ ಮಹಿಳೆ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಒಂದು ಕಾರು ಜಖಂಗೊಂಡಿದೆ.
ಕೊಪ್ಪ ತಾಲೂಕಿನ ಮೇಲಿನಪೇಟೆ ಗ್ರಾಮದ ಸವಿತಾ (48) ಮೃತಪಟ್ಟ ಮಹಿಳೆ. ಸವಿತಾ ಅವರ ತೋಟ ಎನ್.ಆರ್.ಪುರ ತಾಲ್ಲೂಕಿನ ಕಟ್ಟಿನಮನೆ ಬಳಿ ಇತ್ತು. ತೋಟಕ್ಕೆ ಬಂದಿದ್ದ ಮಹಿಳೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ದೊಡ್ಡ ಮರವೊಂದು ಅವರ ಮೇಲೆ ಬಿದ್ದಿದೆ. ಸವಿತಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದೇ ವೇಳೆ ಸಮೀಪದಲ್ಲೇ ರಸ್ತೆಯಲ್ಲಿ ಹೋಗುತ್ತಿದ್ದ ಕಾರಿನ ಮೇಲೆ ಮತ್ತೊಂದು ಮರ ಬಿದ್ದು, ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಅವರನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ಕೈದು ದಿನಗಳಿಂದ ಮಲೆನಾಡು ಭಾಗದಲ್ಲಿ ಮಧ್ಯಾಹ್ನ ನಂತರ ಮಳೆ ಸುರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.