ADVERTISEMENT

ಮೂಡಿಗೆರೆ: ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 15:27 IST
Last Updated 3 ಜುಲೈ 2024, 15:27 IST
ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಬಳಿ ಬುಧವಾರ ಸುರಿದ ಮಳೆನೀರು ಹೆದ್ದಾರಿ ಬದಿಯಲ್ಲಿ ಸಂಗ್ರಹವಾಗಿದ್ದ ಪ್ರದೇಶದಲ್ಲಿ ಕಾರು ಪಲ್ಟಿಯಾಗಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದವು
ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಬಳಿ ಬುಧವಾರ ಸುರಿದ ಮಳೆನೀರು ಹೆದ್ದಾರಿ ಬದಿಯಲ್ಲಿ ಸಂಗ್ರಹವಾಗಿದ್ದ ಪ್ರದೇಶದಲ್ಲಿ ಕಾರು ಪಲ್ಟಿಯಾಗಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದವು   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯಿತು. ರಾತ್ರಿ 11ಕ್ಕೆ ಬಿರುಸುಗೊಂಡ ಮಳೆಯು ಎರಡು ಗಂಟೆಗೂ ಅಧಿಕ ಕಾಲ ಎಡಬಿಡದೇ ಸುರಿದಿದೆ. ಬುಧವಾರ ನಸುಕಿನಿಂದಲೂ ಆರ್ಭಟಿಸಿದ ಮಳೆಯು, ಬೆಳಿಗ್ಗೆ 10ರವರೆಗೂ ನಿರಂತರವಾಗಿ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು. ಮಧ್ಯಾಹ್ನದ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಬಿಡುವು ನೀಡಿದ್ದು, ಸಂಜೆಯ ನಂತರ ಪುನಃ ಮಳೆ ಜೋರಾಗಿತ್ತು.

ಮಳೆ ಜೋರಾಗಿದ್ದರಿಂದ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲು ಪರದಾಡಿದರೆ, ನಿತ್ಯದ ಕೆಲಸಗಳಿಗೆ ತೆರಳುವ ಸಾರ್ವಜನಿಕರು ಮಳೆಯ ನಡುವೆ ಸಾಗಲು ತೊಂದರೆಯಾಯಿತು. ಬೆಳಿಗ್ಗೆ ನಾಲ್ಕು ಗಂಟೆಗೂ ಅಧಿಕ ಕಾಲ ಎಡಬಿಡದೇ ಮಳೆ ಸುರಿದಿದ್ದರಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕಿದರು. ಪರಿಣಾಮ ಕಾಫಿ ತೋಟ, ಭತ್ತದ ಗದ್ದೆಗಳಿಗೆ ಬಹುತೇಕ ಕಾರ್ಮಿಕರಿಲ್ಲದೆ ಜರೆ ಘೋಷಿಸುವಂತಾಯಿತು.

ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಮಳೆ ನೀರು ನಿಂತಿದ್ದರಿಂದ ಸೋಮವಾರಪೇಟೆ ಮೂಲದ ಪ್ರವಾಸಿಗರ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾದವು. ಪಟ್ಟಣದ ಗಂಗನಮಕ್ಕಿ, ಬಿದರಹಳ್ಳಿ, ನೀರುಗಂಡಿ ಮುಂತಾದ ಭಾಗಗಳಲ್ಲಿ ಮಳೆ ನೀರು ಹೆದ್ದಾರಿ ಬದಿಯಲ್ಲಿಯೇ ಸಂಗ್ರಹವಾಗುತ್ತಿದ್ದು, ರಾತ್ರಿ ವೇಳೆ ಅಪಘಾತಗಳು ಸಂಭವಿಸುವಂತಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.