ADVERTISEMENT

ಧ್ವನಿ ಬದಲಾದರೆ ಬದುಕೇ ಬದಲಾಗುತ್ತದೆ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:25 IST
Last Updated 17 ಅಕ್ಟೋಬರ್ 2024, 15:25 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಹುಣ್ಣಿಮೆ ಧರ್ಮ ಸಮಾರಂಭದಲ್ಲಿ ಹೂಲಿ ಗುರು ಸಿದ್ಧನಂಜೇಶ ರಚಿಸಿದ ಅದ್ಭುತ ಕಾಲಜ್ಞಾನ ಕೃತಿಯನ್ನು ರಂಭಾಪುರಿ ಸ್ವಾಮೀಜಿ ಬಿಡುಗಡೆ ಮಾಡಿದರು
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಹುಣ್ಣಿಮೆ ಧರ್ಮ ಸಮಾರಂಭದಲ್ಲಿ ಹೂಲಿ ಗುರು ಸಿದ್ಧನಂಜೇಶ ರಚಿಸಿದ ಅದ್ಭುತ ಕಾಲಜ್ಞಾನ ಕೃತಿಯನ್ನು ರಂಭಾಪುರಿ ಸ್ವಾಮೀಜಿ ಬಿಡುಗಡೆ ಮಾಡಿದರು   

ಬಾಳೆಹೊನ್ನೂರು (ಚಿಕ್ಕಮಗಳೂರು): ‘ಬದುಕಿನಲ್ಲಿ ಬರುವ ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗುವುದು ನಮ್ಮ ಮಾತಿನಿಂದ. ಏನು ಹೇಳುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಹೇಳುತ್ತೇವೆ ಎಂಬುದೇ ಮುಖ್ಯ. ಧ್ವನಿ ಬದಲಾದರೆ ಬದುಕೇ ಬದಲಾಗುತ್ತದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ರಂಭಾಪುರಿ ಪೀಠದಲ್ಲಿ ನಡೆದ ಭೂಮಿ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಕತ್ತಲನ್ನು ದೂಷಿಸುವುದರ ಬದಲಾಗಿ ದೀಪ ಬೆಳಗಿದರೆ ಕತ್ತಲು ತಾನಾಗಿ ಹೊರಟು ಹೋಗುತ್ತದೆ. ಗೆದ್ದವರು ಸಂತೋಷದಿಂದ ಇದ್ದರೆ ಸೋತವರು ಯೋಚಿಸುತ್ತಾ ಇರುತ್ತಾರೆ. ಇವೆರಡೂ ಶಾಶ್ವತವಲ್ಲ ಎಂದು ತಿಳಿದವರು ಪ್ರತಿ ದಿನವನ್ನು ಹೊಸತನದೊಂದಿಗೆ ಕಳೆಯುತ್ತಾರೆ. ಬದುಕು ನಾವು ಬದುಕುವುದಕ್ಕೇ ಹೊರತು ಪರರನ್ನು ಮೆಚ್ಚಿಸಲಿಕ್ಕೆ ಅಲ್ಲ. ಎತ್ತರಕ್ಕೆ ಏರಬಯಸುವ ವ್ಯಕ್ತಿ ಏಣಿ ಕಟ್ಟುವ ಕಾರ್ಯದಲ್ಲಿ ನಿರತನಾಗಿರುತ್ತಾನೆಯೇ ಹೊರತು ಇನ್ನೊಬ್ಬರ ಏಳಿಗೆಗೆ ಕಲ್ಲು ಹಾಕುವುದಿಲ್ಲ. ಶ್ರಮ ಅನ್ನುವುದು ಯಾರನ್ನೂ ಕೊಲ್ಲುವುದಿಲ್ಲ. ಆದರೆ, ಚಿಂತೆ ಬಹಳಷ್ಟು ಜನರನ್ನು ಜೀವಂತವಾಗಿ ಕೊಲ್ಲುತ್ತದೆ. ಸಮಯ, ಸ್ನೇಹ ಮತ್ತು ಆರೋಗ್ಯ ಮೊದಲಾದವುಗಳಿಗೆ ಬೆಲೆ ಕಟ್ಟಲಾಗದು. ಕಳೆದುಕೊಂಡಾಗಲಷ್ಟೇ ಅವುಗಳ ನಿಜವಾದ ಬೆಲೆ ತಿಳಿಯುತ್ತದೆ. ಪ್ರಪಂಚದಲ್ಲಿ ಎರಡಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯ ಪ್ರೀತಿ ತಂದೆಯ ಜವಾಬ್ದಾರಿ’ ಎಂದರು.

ADVERTISEMENT

ಹೂಲಿ ಗುರು ಸಿದ್ಧನಂಜೇಶ ರಚಿಸಿದ ‘ಅದ್ಭುತ ಕಾಲಜ್ಞಾನ’ ಕೃತಿಯನ್ನು ಸ್ವಾಮೀಜಿ ಬಿಡುಗಡೆ ಮಾಡಿದರು. ಹುಣ್ಣಿಮೆ ಪ್ರಯುಕ್ತ ಭೂಮಿ ತಾಯಿಗೆ ವಿಶೇಷ ಪೂಜೆ ಜರುಗಿತು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ, ಮಳಲಿಮಠದ ನಾಗಭೂಷಣ ಶಿವಾಚಾರ್ಯ, ಕರ್ಪುರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ, ಹಾಸನ ತಣ್ಣಿರಹಳ್ಳಿಮಠದ ವಿಜಯಕುಮಾರ ಸ್ವಾಮೀಜಿ, ಮುಳವಾಡ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ, ಕುಂಟೋಜಿ ಕರವೀರೇಶ್ವರ ಹಿರೇಮಠದ ರುದ್ರಮುನಿ ದೇವರು, ಅರಸೀಕೆರೆ ಕೆ.ವಿ.ನಿರ್ವಾಣಸ್ವಾಮಿ, ಜಿ.ಎನ್.ಷಡಕ್ಷರಿ, ಮುರುಂಡಿ ಶಿವಯ್ಯ, ಹಾಸನದ ಶಿವಕುಮಾರ್ ಕಟ್ಟಾಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.