ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿ ಗ್ರಾಮದ ಕೋಟೆ ಮಾರಿಕಾಂಬಾ ದೇವಿಯ ಜಾತ್ರೋತ್ಸವ ಅಂಗವಾಗಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿ ಗುರುವಾರ ಬೆಳಿಗ್ಗೆ ವಿಸರ್ಜನೆ ಮಾಡಲಾಯಿತು.
ಜಾತ್ರೆ ಸ್ಥಳ ಲಕ್ಕವಳ್ಳಿ ಗ್ರಾಮದ ಶ್ರೀ ದೇವಿಯ ಮಾರಿ ಗದ್ದುಗೆಯಿಂದ ಬುಧವಾರ, ಮೂರ್ತಿಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ ರಥದಲ್ಲಿ ಕುಳ್ಳಿರಿಸಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಿ ಗಡಿಸ್ಥಳ ಮಾರಿದಿಬ್ಬದಲ್ಲಿ ವಿಸರ್ಜಿಸಲಾಯಿತು. ಕವಾಡಿ ನೃತ್ಯ, ತಮಿಳು ಸಮಾಜದ ವತಿಯಿಂದ ತಮಿಳುನಾಡಿನ ಕೀಲುಕುದುರೆ, ಕರಗಾಟ, ವಾದ್ಯಗೋಷ್ಠಿ ಮುಂತಾದ ಮನರಂಜನೆ ಕಾರ್ಯಕ್ರಮಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮೇ 21ರಂದು ಕೊನೆಯ ಹಂತದಲ್ಲಿ ಯಾದವ ಸಮಾಜದವರಿಂದ ದೇವಿಗೆ ‘ಮರುಪೂಜೆ’ ಕಾರ್ಯಕ್ರಮದೊಂದಿಗೆ ಜಾತ್ರೆ ಮುಕ್ತಾಯವಾಗುತ್ತದೆ ಎಂದು ಉತ್ಸವ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.