ADVERTISEMENT

ಚಿಕ್ಕಮಗಳೂರು | ಅನರ್ಹರಿಗೆ ಭೂಮಿ: ಸಮಿತಿ ಸದಸ್ಯರಿಗೂ ಸಮಾನ ಹೊಣೆ

ಭೂಸಕ್ರಮೀಣಕರಣ ಸಮಿತಿ ಅಧ್ಯಕ್ಷರಾಗಿದ್ದ ಕ್ಷೇತ್ರದ ಶಾಸಕರಿಗೂ ಹೊಣೆಗಾರಿಕೆ

ವಿಜಯಕುಮಾರ್ ಎಸ್.ಕೆ.
Published 28 ಸೆಪ್ಟೆಂಬರ್ 2024, 5:05 IST
Last Updated 28 ಸೆಪ್ಟೆಂಬರ್ 2024, 5:05 IST
<div class="paragraphs"><p>ವೈ.ಎಸ್.ವಿ.ದತ್ತ</p></div>

ವೈ.ಎಸ್.ವಿ.ದತ್ತ

   

ಚಿಕ್ಕಮಗಳೂರು: ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ ಭೂಸಕ್ರಮೀಕರಣ ಸಮಿತಿ ಅಧ್ಯಕ್ಷರು ಮಾತ್ರವಲ್ಲ, ಸಮಿತಿ ಸದಸ್ಯರನ್ನೂ ತನಿಖಾ ವರದಿಯಲ್ಲಿ ಸಮಾನ ಹೊಣೆ ಮಾಡಲಾಗಿದೆ.

ಮೂಡಿಗೆರೆ ಮತ್ತು ಕಡೂರು ತಾಲ್ಲೂಕಿನಲ್ಲಿ ಅನರ್ಹರಿಗೆ ಭೂಮಂಜೂರಾತಿ ನೀಡಿರುವ ಕುರಿತು ತನಿಖೆ ನಡೆಸಲು ನೇಮಿಸಿದ್ದ ತನಿಖಾ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ADVERTISEMENT

ಅಧಿಕಾರಿಗಳ ಜತೆಗೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೂ ಅಷ್ಟೇ ಜವಾಬ್ದಾರಿ ಇದೆ. ಅಕ್ರಮಕ್ಕೆ ಸಮಿತಿಯೂ ನೇರ ಹೊಣೆ ಎಂದು ತನಿಖಾ ತಂಡ ವರದಿಯಲ್ಲಿ ಉಲ್ಲೇಖಿಸಿದೆ. ವರದಿಯಲ್ಲಿರುವ ಅಂಕಿ–ಅಂಶ ಗಮನಿಸಿದರೆ ವೈ.ಎಸ್.ವಿ. ದತ್ತ ಅವರ ಕಾಲದಲ್ಲೇ ಹೆಚ್ಚು ಭೂಮಿ ಅನರ್ಹರಿಗೆ ಭೂಮಿ ಮಂಜೂರಾಗಿದೆ ಎಂದು ದಾಖಲಿಸಲಾಗಿದೆ.

ವೈ.ಎಸ್.ವಿ.ದತ್ತ ಅವರ ಅಧ್ಯಕ್ಷತೆ ಭೂಸಕ್ರಮೀಕರಣ ಸಮಿತಿ ಮುಂದೆ ಬಂದಿದ್ದ ಭೂಮಂಜೂರಾತಿ ಪ್ರಕರಣಗಳ ಪೈಕಿ 252 ಮಂದಿ ಅನರ್ಹರಿಗೆ 719 ಎಕರೆ ಭೂಮಿ ಮಂಜೂರಾಗಿದೆ ಎಂದು ಉಲ್ಲೇಖಿಸಲಾಗಿದೆ. ಅವರ ಅವಧಿಯಲ್ಲಿ ಸಮಿಯಲ್ಲಿ ಸದಸ್ಯರಾಗಿದ್ದ ಮೂವರಿಗೂ ಅಷ್ಟೇ ಪ್ರಮಾಣದಲ್ಲಿ ಹೊಣೆ ನಿಗದಿ ಮಾಡಲಾಗಿದೆ. ಅವರ ಹೆಸರಿನ ಮುಂದೆ ತಲಾ 252 ಪ್ರಕರಣ ಮತ್ತು 719 ಎಕರೆ ವಿಸ್ತೀರ್ಣ ಎಂದು ವರದಿಯಲ್ಲಿ ತನಿಖಾ ತಂಡ ನಮೂದಿಸಿದೆ.

ಬಿ.ಎಲ್.ಪ್ರಕಾಶ್‌, ಬೆಳ್ಳಿ ಪ್ರಕಾಶ್, ಮೋಟಮ್ಮ, ಎಂ.ಪಿ.ಕುಮಾರಸ್ವಾಮಿ ಅವಧಿಯಲ್ಲಿದ್ದ ತಲಾ ಮೂವರು ಸದಸ್ಯರಿಗೂ ಅಷ್ಟೇ ಪ್ರಮಾಣ ಹೊಣೆ ಹೊರಿಸಲಾಗಿದೆ.

ಸಿ.ಟಿ.ರವಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 32 ಅನರ್ಹ ಪ್ರಕರಣಗಳಲ್ಲಿ 80 ಎಕರೆ, ಬಿ.ಬಿ.ನಿಂಗಯ್ಯ ಅವರು ಅಧ್ಯಕ್ಷರಾಗಿದ್ದಾಗ 29 ಪ್ರಕರಣಗಳಲ್ಲಿ 60 ಎಕರೆಯಷ್ಟು ಅನರ್ಹರಿಗೆ ಭೂಮಿ ಮಂಜೂರಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಇಬ್ಬರು ಅಧ್ಯಕ್ಷತೆಯಲ್ಲಿ ಕಡಿಮೆ ಭೂಮಿ ಅನರ್ಹರಿಗೆ ಮಂಜೂರಾಗಿದ್ದರೆ. ಇವರ ಅವಧಿಯಲ್ಲಿದ್ದ ಸದಸ್ಯರಿಗೂ ಅಷ್ಟೇ ಪ್ರಮಾಣದ ಹೊಣೆ ನಿಗದಿಯಾಗಿದೆ.

ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗಿಂತ ತಪ್ಪಿತಸ್ಥರ ಪಟ್ಟಿಯಲ್ಲಿ ತಹಶೀಲ್ದಾರ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವು ತಹಶೀಲ್ದಾರ್‌ಗಳು ಹೆಸರಿನ ಮುಂದೆ 1900 ಎಕರೆಗೂ ಹೆಚ್ಚು ಸರ್ಕಾರಿ ಜಾಗವನ್ನು ಅನರ್ಹರಿಗೆ ಮಂಜೂರು ಮಾಡಿದ್ದಾರೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.

ಅಷ್ಟೂ ಜಮೀನನ್ನು ರದ್ದುಪಡಿಸಿ ಸರ್ಕಾರದ ವಶಕ್ಕೆ ಪಡೆಯಬಹುದು. ಅಲ್ಲದೇ ತಪ್ಪೆಸಗಿದ ಸಿಬ್ಬಂದಿ ಮತ್ತು ಸಮಿತಿ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸರ್ಕಾರ ತೀರ್ಮಾನಿಸಬೇಕಾಗಿದೆ ಎಂದು ವರದಿಯಲ್ಲಿ ತನಿಖಾ ತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.