ಬಾಳೆಹೊನ್ನೂರು: ಪಟ್ಟಣದ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಷರನಗರದ ಕ್ರೀಡಾಂಗಣದ ಬಳಿ ಬಂಡಿಮಠದ ಪ್ರವಾಹ ಸಂತ್ರಸ್ತರಿಗೆ ನಿವೇಶನ ನೀಡದೆ ಬೇರೆ ಕಡೆಯಲ್ಲಿ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಸಮೀಪದ ಅಕ್ಷರನಗರದ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಿಮಠದಲ್ಲಿನ ಪ್ರವಾಹ ಸಂತ್ರಸ್ತರು ಹಾಗೂ ಭದ್ರಾ ಸೇತುವೆ ನಿರ್ಮಾಣದಿಂದ ಮನೆ ಕಳೆದುಕೊಳ್ಳುವ ಗ್ರಾಮಸ್ಥರಿಗೆ ಬಿ.ಕಣಬೂರು ಗ್ರಾಮದ ಅಕ್ಷರನಗರದ ಕ್ರೀಡಾಂಗಣದ ಬಳಿ ನಿವೇಶನ ನೀಡಲು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೆ ಸ್ಥಳೀಯ ಯುವಕರು, ಗ್ರಾಮಸ್ಥರು ಕ್ರೀಡಾಂಗಣದ ಬಳಿಯಲ್ಲಿ ನಿವೇಶನ ನೀಡಲು ವಿರೋಧ ವ್ಯಕ್ತಪಡಿಸಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ ಎಂದರು.
ಯುವಕರಿಗೆ ಕ್ರೀಡಾಂಗಣದ ಕೊರತೆ ಇರುವುದು ಅರಿವಿಗೆ ಬಂದಿದೆ. ಕಾರಣ ಕ್ರೀಡಾಂಗಣವನ್ನು ಉಳಿಸಿ ಇದೇ ಗ್ರಾಮದಲ್ಲಿ ಇರುವ ಕಂದಾಯ ಭೂಮಿಯನ್ನು ಸಂತ್ರಸ್ತರ ನಿವೇಶನಕ್ಕೆ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ಕ್ರೀಡಾಂಗಣದ ಜಾಗದಲ್ಲಿ ನಿವೇಶನ ನೀಡುವುದಿಲ್ಲ. ಕ್ರೀಡಾಂಗಣವನ್ನು ಉಳಿಸಲು ಬದ್ಧ ಎಂದು ಭರವಸೆ ನೀಡಿದರು.
ಬಿ.ಕಣಬೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ಸಿ.ಸಂತೋಷ್ಕುಮಾರ್, ಬಿ.ಕೆ.ಮಧುಸೂದನ್, ಮಾಜಿ ಅಧ್ಯಕ್ಷ ಜಾನ್ ಡಿಸೋಜ, ಗ್ರಾಮಸ್ಥರಾದ ಸಾನಿ ಮಂಜು, ರಮೇಶ್, ನಾಗರಾಜ್ ಎಲಿಗಾರ್, ರಿಕ್ಸಾನ್, ಸಂದೀಪ್ಶೆಟ್ಟಿ, ಶಮೇಶ್, ಸಿದ್ದಿಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.