ಕಡೂರು: ಪ್ರಿಯಕರನ ಜೊತೆಗೂಡಿ ಮಹಿಳೆಯೊಬ್ಬರು ಪತಿಯನ್ನು ಹತ್ಯೆ ಮಾಡಿರುವ ಘಟನೆ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ತಾಲ್ಲೂಕಿನ ದೊಡ್ಡಿಬೀರನಹಳ್ಳಿಯ ಜಯಣ್ಣ (38) ಕೊಲೆಯಾದ ವ್ಯಕ್ತಿ. ಶೃತಿ ಹಾಗೂ ಅದೇ ಗ್ರಾಮದ ವೆಲ್ಡರ್ ಕಿರಣ್ ಕುಮಾರ್ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಶೃತಿ ಮತ್ತು ಕಿರಣ್ ಸಲುಗೆಯಿಂದ ಇದ್ದುದನ್ನು ಜಯಣ್ಣ ಆಕ್ಷೇಪಿಸಿದ್ದರು ಎಂದು ಹೇಳಲಾಗಿದ್ದು ಇದರಿಂದ ಕೋಪಗೊಂಡ ಶೃತಿ ಮತ್ತು ಕಿರಣ್ ಸೇರಿ ಜಯಣ್ಣನಿಗೆ ವಿಷವುಣಿಸಿದ್ದಾರೆ. ಪತಿಗೆ ಹೊಟ್ಟೆನೋವು ಎಂದು ಅರಸೀಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಾರ್ಗಮಧ್ಯೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಹೊಟ್ಟೆನೋವಿನಿಂದ ಪತಿ ಸತ್ತಿರುವುದಾಗಿ ಹೇಳಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂದೇಹಗೊಂಡು ಶೃತಿ ಹಾಗೂ ಕಿರಣನ ಮೊಬೈಲ್ ಫೋನ್ ಪರಿಶೀಲಿಸಿದಾಗ ಇಬ್ಬರ ನಡುವೆ ಸಲುಗೆ ಇದ್ದುದು ಗೊತ್ತಾಗಿದೆ. ವಿಚಾರಣೆ ನಡೆಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಿಎಸ್ಐ ಕಿರಣ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.