ನರಸಿಂಹರಾಜಪುರ: ಕ್ಷೇತ್ರದ ಮಾಜಿ ಶಾಸಕರು ಸೋಲಿನ ಹತಾಶೆಯಿಂದ ಹೊರಬರಲಾರದೆ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಟೀಕಿಸಿದರು.
ಕಾಂಗ್ರೆಸ್ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಬೈಕ್ ಜಾಥಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪರ ಮತಯಾಚಿಸಿ ಅವರು ಮಾತನಾಡಿದರು.
‘ನಾನು ಏನು ಕೆಲಸ ಮಾಡಬೇಕೆಂದು ಮತದಾರರು, ಇಬ್ಬರು ನಿಗಮ ಮಂಡಳಿ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಹೇಳುತ್ತಾರೆ. ಮಾಜಿ ಶಾಸಕರು ನನ್ನ ಕೆಲಸದ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ. ಅಭಿವೃದ್ಧಿ ನೆಪದಲ್ಲಿ ಪಟ್ಟಣವನ್ನು ಹಾಳು ಮಾಡಿ, ಜನರ ನೆಮ್ಮದಿ ಕೆಡಿಸಿ, ಈಗ ಕಾಂಗ್ರೆಸ್ನವರು ಸರಿಪಡಿಸಲಿ ಎಂಬ ಮನೋಭಾವನೆ ಹೊಂದಿದ್ದಾರೆ’ ಎಂದು ದೂರಿದರು.
ಬಸ್ತಿಮಠದಿಂದ ಪ್ರವಾಸಿಮಂದಿರದವರೆಗೆ ರಸ್ತೆ ವಿಸ್ತರಣೆ, ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಲಾಗುತ್ತಿದೆ. ಯುವ ಮತದಾರರನ್ನು ಸೆಳೆಯಲು ಉದ್ಯೋಗದ ಭರವಸೆ ನೀಡಿದ್ದ ಬಿಜೆಪಿ ತನ್ನ 10 ವರ್ಷಗಳ ಆಡಳಿತದ ಅವಧಿಯಲ್ಲಿ ಮಾತು ತಪ್ಪಿದೆ. ಪ್ರಧಾನ ಮಂತ್ರಿ ತಮ್ಮ ಹುದ್ದೆಗೆ ಅಗೌರವ ತರುವ ರೀತಿ ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಬಿಜೆಪಿ ದ್ವೇಷದ ರಾಜಕಾರಣ ಮಾಡಿದರೆ ಕಾಂಗ್ರೆಸ್ ಪ್ರೀತಿಯ ರಾಜಕಾರಣ ಮಾಡುತ್ತಿದೆ. ಹೊನ್ನೇಕೂಡಿಗೆಯಿಂದ ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಗೇರುಬೈಲ್ ನಟರಾಜ್, ಪಿ.ಆರ್.ಸದಾಶಿವ, ಕೆ.ಎಂ.ಸುಂದರೇಶ್, ಸಾಜು, ಪ್ರಶಾಂತ್ ಶೆಟ್ಟಿ, ಎಲ್ದೋಸ್, ಉಪೇಂದ್ರ ಮತ್ತಿತರರಿದ್ದರು. ತಾಲ್ಲೂಕಿನ ಬಿ.ಎಚ್.ಕೈಮರದಿಂದ ಪಟ್ಟಣದ ಪ್ರವಾಸಿ ಮಂದಿರದವರೆಗೆ ಯುವ ಕಾಂಗ್ರೆಸ್ ಘಟಕದಿಂದ ಬೈಕ್ ಜಾಥಾ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.