ಚಿಕ್ಕಮಗಳೂರು: ನಿತ್ಯ ಬದುಕಿನಲ್ಲಿ ವಿಜ್ಞಾನ ಎಂಬುದು ಅಡುಗೆ ಮನೆಯಿಂದ ಹಿಡಿದು ಶಾಸ್ತ್ರ, ಸಂಪ್ರದಾಯದವರೆಗೂ ಬಳಕೆಯಲ್ಲಿದೆ. ಇಂದು ವಿಜ್ಞಾನವಿಲ್ಲದೇ ಜೀವನವಿಲ್ಲ ಎನ್ನುವಂತಾಗಿದೆ ಎಂದು ಆವತಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ರೇಖಾ ನಾಗರಾಜರಾವ್ ಹೇಳಿದರು.
ನಗರದ ಕೋಟೆ ಬಡಾವಣೆಯ ಗಾಂತವ್ಯ ನೃತ್ಯ ಶಾಲೆಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರದಲ್ಲಿ ‘ನಿತ್ಯ ಜೀವನ ಮತ್ತು ವಿಜ್ಞಾನ’ ಕುರಿತು ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.
‘ಪ್ರತಿ ಮಕ್ಕಳು ಮೂಢನಂಬಿಕೆಗಳಿಗೆ ಸಿಲುಕದೆ ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ವಿಜ್ಞಾನ ನಮ್ಮ ನಿತ್ಯದ ಬದುಕಿಗೆ ಅತ್ಯವಶ್ಯಕ ಎಂಬುದನ್ನು ತಿಳಿದುಕೊಳ್ಳಬೇಕು. ಮರಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಪ್ರಜ್ಞೆ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಗಾಂತವ್ಯ ಶಾಲೆ ವ್ಯವಸ್ಥಾಪಕಿ ನವಿತಾ ಮಾತನಾಡಿ, ‘ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಏಳಿಗೆಗೆ ಸಹಕಾರಿ. ಈ ಶಿಬಿರದಲ್ಲಿ ಹಾಡು, ನೃತ್ಯ, ಬರವಣಿಗೆ, ಸಾಹಿತ್ಯ, ಸಂಗೀತ, ಕಲೆ, ವಿಜ್ಞಾನ ಹೀಗೆ ಹಲವು ವಿಷಯಗಳ ಕುರಿತು ತಿಳಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಮಕ್ಕಳಿಗೆ ಆಕರ್ಷಣೀಯವಾದ ಕಾಮನ ಬಿಲ್ಲಿನ ಪ್ರಯೋಗ, ಗಾಳಿಯ ಒತ್ತಡ, ಸರಳ ರಾಸಾಯನಿಕ ಕ್ರಿಯೆಗಳ ಪ್ರಯೋಗ ನಡೆಸಿ ಮಕ್ಕಳಿಂದಲೂ ಅವುಗಳನ್ನು ಮಾಡಿಸಿ ಅವರ ಕುತೂಹಲ ಹೆಚ್ಚಿಸಿದರು. ಶಿಬಿರದಲ್ಲಿ 40ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಶಿಕ್ಷಕ ವಿವೇಕ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.