ADVERTISEMENT

ಚಿಕ್ಕಮಗಳೂರು | ಸಿಬ್ಬಂದಿ ಕೊರತೆ ಶೀಘ್ರವೇ ಕ್ರಮ; ಡಿಸಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 14:52 IST
Last Updated 6 ಡಿಸೆಂಬರ್ 2023, 14:52 IST

ಉಳ್ಳಾಲ: ಉಳ್ಳಾಲ ಸೇರಿದಂತೆ ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಪೌರಾಡಳಿತ ಇಲಾಖೆ ಶೀಘ್ರವೇ ಕ್ರಮ ವಹಿಸಲಿದೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು. 

‘ಉಳ್ಳಾಲ ನಗರಸಭೆ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ತಿಂಗಳಾಂತ್ಯದಲ್ಲಿ ಘನತ್ಯಾಜ್ಯ ವಿಲೇವಾರಿಗೆ ಒಂದು ಟಿಪ್ಪರ್‌ ಸೇರಿದಂತೆ ಆರು ಹೊಸ ವಾಹನಗಳು ನಗರಸಭೆಗೆ ಸೇರ್ಪಡೆಗೊಳ್ಳಲಿವೆ’ ಎಂದು ದ.ಕ ಜಿಲ್ಲಾಧಿಕಾರಿ ಹೇಳಿದರು.

‘ಕುಡಿಯುವ ನೀರು ಯೋಜನೆಯಲ್ಲಿ ಆಗಿರುವ ತೊಡಕುಗಳನ್ನು ಸರಿಪಡಿಸುವಂತೆ ಎಂಜಿನಿಯರ್‌ ಕೇಳಿಕೊಂಡಿದ್ದಾರೆ. ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಟೆಂಡರ್‌ ಪ್ರಕ್ರಿಯೆ ನಡೆದ ತಕ್ಷಣ ಇದೇ ತಿಂಗಳ ಅಂತ್ಯಕ್ಕೆ ವಾಹನಗಳು ನಗರಸಭೆಗೆ ಬರಲಿದೆ’ ಎಂದರು. 

ADVERTISEMENT

ತುಂಬೆ ಅಣೆಕಟ್ಟಿನ ಪೈಪ್‌ ಲೈನ್‌ಗೆ ಬರಬೇಕಾದ ನೀರು ವಿದ್ಯುತ್‌ ಅಭಾವದಿಂದ ಸಂಗ್ರಹಣೆಯಾಗುತ್ತಿಲ್ಲ. ಜತೆಗೆ ತುಂಬೆ ಅಣೆಕಟ್ಟಿನಿಂದ ಬರುವ ನೀರಿಗೆ ಕನ್ನ ಹಾಕಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ 30 ವರ್ಷಗಳಷ್ಟು ಹಳೆಯ ಪೈಪ್‌ನಿಂದಾಗಿ ನೀರು ಬರುತ್ತಿಲ್ಲ ಎಂದು ಸದಸ್ಯ ದಿನಕರ್‌ ಉಳ್ಳಾಲ್‌ ಆರೋಪಿಸಿದರು. ಇದಕ್ಕೆ ಸದಸ್ಯ ಬಾಝಿಲ್‌ ಡಿಸೋಜ ಧ್ವನಿಗೂಡಿಸಿದರು.

ಬಾಡಿಗೆ ನೀಡದ ವ್ಯಕ್ತಿಗಳಿಂದ 10 ದಿನಗಳ ಒಳಗೆ ಅಂಗಡಿಗಳನ್ನು ತೆರವುಗೊಳಿಸಿ, ನಗರಸಭೆ ವ್ಯಾಪ್ತಿಗೆ ತರುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಅಭಿಷೇಕ್ ವಿ, ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ.ವಿ ಆಳ್ವ, ಉಳ್ಳಾಲ ತಾಲ್ಲೂಕು ತಹಶೀಲ್ದಾರ್‌ ಪುಟ್ಟರಾಜು, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್‌ ಪುರಂದರ್‌, ಸಹಾಯಕ ಎಂಜಿನಿಯರ್‌ ತೇಜಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.