ಚಿಕ್ಕಮಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ-2 ಶುಕ್ರವಾರದಿಂದ (ಜೂನ್ 14) 22ರ ವರೆಗೆ ಜಿಲ್ಲೆಯ 9 ಕೇಂದ್ರಗಳಲ್ಲಿ ನಡೆಯಲಿದೆ. ಜಿಲ್ಲೆಯ ಒಟ್ಟು 2,125 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಸುಗಮವಾಗಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ.
ತಾಲ್ಲೂಕು ಮತ್ತು ಜಿಲ್ಲಾ ಹಂತದ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ ಕುರಿತು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಗೋಪಾಲಕೃಷ್ಣ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ನೋಡಲ್ ಅಧಿಕಾರಿಗಳೊಂದಿಗೆ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಪರೀಕ್ಷಾ ಕಾರ್ಯಕ್ಕೆ 9 ಅಧೀಕ್ಷಕರು, 2 ಉಪ ಅಧೀಕ್ಷಕರು, 8 ಕಸ್ಟೋಡಿಯನ್, 8 ಸ್ಥಾನಿಕ ಜಾಗೃತ ದಳ, 100 ಕೊಠಡಿ ಮೇಲ್ವಿಚಾರಕರು, 8 ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ 10 ವಿಷಯ ನಿರ್ವಾಹಕರನ್ನು ನೇಮಿಸಲಾಗಿದೆ ಎಂದು ಡಿಡಿಪಿಐ(ಆಡಳಿತ) ಎಸ್.ಆರ್ ಮಂಜುನಾಥ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಮತ್ತು ತಾಲ್ಲೂಕು ಜಾಗೃತ ದಳ ಹಾಗೂ ವೆಬ್ ಕ್ಯಾಮೆರಾ ವೀಕ್ಷಣಾ ತಂಡ, 8 ಮಾರ್ಗಾಧಿಕಾರಿಗಳು, ಚಾಲಕರು, 26 ಪೊಲೀಸ್ ಸಿಬ್ಬಂದಿ ಮತ್ತು 8 ಆರೋಗ್ಯ ಸಿಬ್ಬಂದಿ ಸೇರಿದಂತೆ ಒಟ್ಟು 170 ಅಧಿಕಾರಿ ಮತ್ತು ಸಿಬ್ಬಂದಿ ಪರೀಕ್ಷಾ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ವಿವರಿಸಿದರು.
ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ಕೊಠಡಿ ಸುರಕ್ಷತೆ ಪರಿಶೀಲಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ ಪರೀಕ್ಷಾ ದಿನದಂದು 144 ಸೆಕ್ಷನ್ ಜಾರಿಯಲ್ಲಿರಲಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿ.ಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜಿಲ್ಲೆಯ 9 ಕೇಂದ್ರಗಳ ವೀಕ್ಷಣೆಗೆ ಜಿಲ್ಲಾ ಪಂಚಾಯಿತಿಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಡಯಟ್ನ ಉಪನಿರ್ದೇಶಕ ಪ್ರಕಾಶ್ ಇದ್ದರು.
ವೇಳಾಪಟ್ಟಿ:
ಜೂ. 14ರಂದು ಪ್ರಥಮ ಭಾಷೆ, 15ರಂದು ತೃತೀಯ ಭಾಷೆ, 18ರಂದು ಗಣಿತ, 20ರಂದು ವಿಜ್ಞಾನ, 21ರಂದು ಇಂಗ್ಲಿಷ್ ಹಾಗೂ 22ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.
Highlights - ವಿದ್ಯಾರ್ಥಿಗಳ ಮಾಹಿತಿ ಪರೀಕ್ಷೆ ಬರೆಯುವ ಒಟ್ಟು ವಿದ್ಯಾರ್ಥಿಗಳು;2125 ಪುನರಾವರ್ತಿತ ವಿದ್ಯಾರ್ಥಿಗಳು;1841 ಖಾಸಗಿ ಹೊಸ ವಿದ್ಯಾರ್ಥಿಗಳು;70 ಅಂಕ ಉತ್ತಮಪಡಿಸಿಕೊಳ್ಳಲು ಪರೀಕ್ಷೆ ಬರೆಯುತ್ತಿರುವವರು;214
Quote - ‘ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು. ಸಿ.ಸಿ ಟಿವಿ ಕ್ಯಾಮೆರಾ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಯುಪಿ.ಎಸ್ ವ್ಯವಸ್ಥೆ ಇರಬೇಕು.ಅಹಿತಕರ ಘಟನೆಗಳು ಸಂಭವಿಸಿದಲ್ಲಿ ನಿರ್ಧಾಕ್ಷಿಣ್ಯ ಕ್ರಮವಹಿಸಲಾಗುವುದು – ಬಿ.ಗೋಪಾಲಕೃಷ್ಣ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ
Cut-off box - ಪರೀಕ್ಷಾ ಕೇಂದ್ರಗಳು: ಬೀರೂರಿನ ಕೆ.ಎಲ್.ಕೆ ಸರ್ಕಾರಿ ಪ್ರೌಢಶಾಲೆ ಚಿಕ್ಕಮಗಳೂರಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು[ಪ್ರೌಢಶಾಲಾ ವಿಭಾಗ] ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು[ಪ್ರೌಢಶಾಲಾ ವಿಭಾಗ] ಚಿಕ್ಕಮಗಳೂರು(ಕಡೂರು ಬ್ಲಾಕ್) ಕೆ.ಪಿ.ಎಸ್ ಪ್ರೌಢಶಾಲೆ ಕೊಪ್ಪ ಮತ್ತು ನರಸಿಂಹರಾಜಪುರ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು[ಪ್ರೌಢಶಾಲಾ ವಿಭಾಗ] ಮೂಡಿಗೆರೆ ಸರ್ಕಾರಿ ಪಿಯು ಕಾಲೇಜು[ಪ್ರೌಢಶಾಲಾ ವಿಭಾಗ] ಶೃಂಗೇರಿ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು[ಪ್ರೌಢಶಾಲಾ ವಿಭಾಗ] ತರೀಕೆರೆ ಹಾಗೂ ಅಜ್ಜಂಪುರದ ಶೆಟ್ರು ಸಿದ್ದಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಿತ್ಯ ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.