ಮಂಗಳೂರು: ಮನೆಯ ಮುಂದೆ ನಕ್ಷತ್ರ ಮಿನುಗುತ್ತಿದೆ. ಮನೆಯೊಳಗೆ ಕೇಕ್, ’ಕುಸ್ವಾರ್’ ತಯಾರಿ ಭರದಿಂದ ನಡೆದಿದೆ. ಮನೆಯ ಆವರಣದಲ್ಲಿ ಬಾಲ ಯೇಸುವಿಗಾಗಿ ಪುಟ್ಟ ಗೋದಲಿ ಸಿದ್ಧಗೊಳ್ಳುತ್ತಿದೆ. ಸಂಜೆ ವೇಳೆ ತಂಗಾಳಿಯಂತೆ ತೇಲಿಬರುವ ‘ಕ್ಯಾರೆಲ್ಸ್’ ಗೀತೆ ಕಿವಿಗೆ ಇಂಪು ನೀಡುತ್ತಿದೆ. ಬಿಳಿಗಡ್ಡದ, ಕೆಂಪು ಉಡುಪು ಧರಿಸಿದ ಸಾಂತಾಕ್ಲಾಸ್ ಮಕ್ಕಳನ್ನು ರಂಜಿಸುತ್ತಾ, ಅವರಿಗೆ ಉಡುಗೊರೆ ಕೊಡುತ್ತಾ ಮನೆಯಿಂದ ಮನೆಗೆ ಕ್ರಿಸ್ಮಸ್ ಸಂದೇಶ ಸಾರುತ್ತಿದ್ದಾರೆ.
ವರ್ಷಾಂತ್ಯದ ಬಹುದೊಡ್ಡ ಸಂಭ್ರಮ ಕ್ರಿಸ್ಮಸ್ಗೆ ಕರಾವಳಿ ಮತ್ತೊಮ್ಮೆ ಸಜ್ಜಾಗಿದೆ. ಡಿ.24ರ ಮಧ್ಯರಾತ್ರಿ ವಿಶೇಷ ಪೂಜೆಯೊಂದಿಗೆ ಯೇಸುಕ್ರಿಸ್ತನ ಜನನ ಸಂಭ್ರಮವನ್ನು ಆಚರಿಸಲಾಗುತ್ತದೆ. ಆ ಮೂಲಕ ಡಿ. 1ರಿಂದ ಆರಂಭಗೊಂಡ ಕ್ರಿಸ್ಮಸ್ ಧಾರ್ಮಿಕ ಆಚರಣೆಗಳಿಗೆ ತೆರೆ ಬೀಳಲಿದೆ. ವಿಶ್ವದಾದ್ಯಂತ ಕ್ರೈಸ್ತರು ಕ್ರಿಸ್ಮಸ್ ಹಬ್ಬವನ್ನು ಏಕಕಾಲದಲ್ಲಿ ಆಚರಿಸುತ್ತಾರಾದರೂ ಆಚರಣೆಯಲ್ಲಿ ಏಕರೂಪತೆ ಇಲ್ಲ. ಆಯಾ ಪ್ರದೇಶ, ಸಂಸ್ಕೃತಿಗೆ ತಕ್ಕಂತೆ ಹಬ್ಬದ ಆಚರಣೆಯಲ್ಲಿ ವ್ಯತ್ಯಾಸ ಇದೆ. ಕರಾವಳಿ ಕ್ರೈಸ್ತರ ಕ್ರಿಸ್ಮಸ್ ಆಚರಣೆಯಲ್ಲೂ ಈ ಸಾಂಸ್ಕೃತಿಕ ವೈವಿಧ್ಯ ಕಾಣಬಹುದು.
ಪೊರ್ಚುಗಿಸರೊಂದಿಗೆ ಕ್ರೈಸ್ತ ಧರ್ಮವು ಕರಾವಳಿ ನೆಲವನ್ನು ಪ್ರವೇಶಿಸಿತು. ಕರಾವಳಿಯಲ್ಲಿ ಮುಖ್ಯವಾಗಿ ರೋಮನ್, ಸಿರಿಯನ್ ಕಥೋಲಿಕ್, ಪ್ರಾಟೆಸ್ಟೆಂಟ್, ಸಿಎಸ್ಐ, ಮೆಥಡಿಸ್ಟ್, ಪೆಂಟಕೋಸ್ಟ್ ಹೀಗೆ ಕ್ರೈಸ್ತ ಧರ್ಮದ ಹಲವು ಉಪ ಪಂಗಡಗಳು, ಸಿರೊ ಮಲಬಾರ್, ಸಿರೊ ಮಲಂಕರ, ಲ್ಯಾಟಿನ್, ಸಿಎಸ್ಐ, ಅರ್ಥೊಡಕ್ಸ್ ಧರ್ಮ ಕೇಂದ್ರಗಳನ್ನು ಕಾಣಬಹುದು. ಇಲ್ಲಿನ ಕ್ರೈಸ್ತರಲ್ಲಿ ಕನ್ನಡ, ಕೊಂಕಣಿ, ಮಲೆಯಾಳಂ, ತಮಿಳು ಭಾಷಿಕರೂ ಇದ್ದಾರೆ. ಪ್ರತಿ ಉಪಪಂಗಡದ ಕ್ರಿಸ್ಮಸ್ ಆಚರಣೆ ಮತ್ತು ಆಹಾರದಲ್ಲಿ ವ್ಯತ್ಯಾಸವಿದೆ.
ಕ್ರಿಸ್ಮಸ್ ಸಂದರ್ಭದಲ್ಲಿ ಎಲ್ಲೆಡೆ ಕೇಕ್ ಹಂಚುವ ಪದ್ಧತಿಯಿದೆ. ಮಂಗಳೂರಿನಲ್ಲಿ ಕೊಂಕಣಿ ಕಥೋಲಿಕ್ ಕ್ರೈಸ್ತರು ಕೇಕ್ ಜತೆಗೆ ‘ಕುಸ್ವಾರ್’ ಹಂಚುತ್ತಾರೆ. ನೆವ್ರಿಯೊ, ಕುಕ್ಕೀಸ್, ಅಕ್ಕಿ, ರವೆ ಲಡ್ಡು, ವಿವಿಧ ರೀತಿಯ ಚಕ್ಕುಲಿಗಳು, ಅಕ್ಕಿ ಹಿಟ್ಟಿನಿಂದ ತಯಾರಿಸಿದ ಸಣ್ಣ ಗೋಲಿಯಾಕಾರದ ತಿನಿಸುಗಳನ್ನು ಮನೆಯಲ್ಲೇ ತಯಾರಿಸಿ, ಅದನ್ನು ಹಬ್ಬದ ದಿನ ಪಾತ್ರೆಯೊಂದರಲ್ಲಿ ಒಪ್ಪ, ಓರಣವಾಗಿ ಜೋಡಿಸಿ, ನೆರೆಮನೆಯವರಿಗೆ, ಬಂಧುಗಳಿಗೆ, ಅತಿಥಿಗಳಿಗೆ ಹಂಚುತ್ತಾರೆ. ಕ್ರಿಸ್ಮಸ್ಗೆ ವಿಶೇಷ ಮೆರುಗು ನೀಡುವುದೇ ಈ ಕುಸ್ವಾರ್ನ ತಯಾರಿ ಹಾಗೂ ಹಂಚುವಿಕೆ. ಇತ್ತೀಚಿನ ವರ್ಷಗಳಲ್ಲಿ ಈ ಆಚರಣೆ ವಾಣಿಜ್ಯ ಸ್ವರೂಪ ಪಡೆದುಕೊಂಡು ‘ಕುಸ್ವಾರ್ ಟೈಮ್ಸ್’ಎಂಬ ಹೆಸರಿನಿಂದಲೂ ಜನಪ್ರಿಯಗೊಂಡಿದೆ. ಪೊರ್ಚುಗಿಸರ ಸಂಪ್ರದಾಯವಾದ ‘ಕನ್ಸೋಡಾ’ ಎಂಬ ಪರಿಕಲ್ಪನೆಯಿಂದ ‘ಕುಸ್ವಾರ್’ ಕರಾವಳಿಯಲ್ಲಿ ಆಚರಣೆಗೆ ಬಂತು.
ಕರಾವಳಿಗೆ ವಲಸೆ ಬಂದು ನೆಲೆಗೊಂಡ ಕೊಚ್ಚಿ ಕ್ರಿಶ್ಚಿಯನ್ನರು (ಕೇರಳ ಕ್ರೈಸ್ತರು) ಹಬ್ಬದ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಕೇರಳ ಶೈಲಿಯ ಸಿಹಿ ತಿನಿಸುಗಳನ್ನು ತಯಾರಿಸುತ್ತಾರೆ. ಹಬ್ಬದ ದಿನ ವಿಶೇಷವಾಗಿ ತಯಾರಿಸುವ ಮಾಂಸಾಹಾರ, ಕೇಕ್ ಅನ್ನು ನೆರೆಮನೆಯವರಿಗೆ ಕೊಡುವ ಸಂಪ್ರದಾಯವಿದೆ. ಅತಿಥಿಗಳನ್ನು, ಸ್ನೇಹಿತರನ್ನು ಮನೆಗೆ ಊಟಕ್ಕೆ ಆಹ್ವಾನಿಸುವ ಸಂಪ್ರದಾಯವೂ ಇದೆ.
ಡಿ.1ರಿಂದಲೇ ಆರಂಭ: ಸಾಮಾನ್ಯವಾಗಿ ‘ಕ್ರಿಸ್ಮಸ್ ಆಚರಣೆ ಡಿ. 1ರಿಂದಲೇ ಆರಂಭವಾಗುತ್ತದೆ. ಡಿ. 1ರಿಂದ ಡಿ.24ರವರೆಗೆ ಕ್ರೈಸ್ತರಿಗೆ ಉಪವಾಸ ಕಾಲ. ಆದರೆ, ಇದು ಕಡ್ಡಾಯವಾಗಿ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆ ಅಲ್ಲ. ಹೆಚ್ಚಿನವರು ಈ ಅವಧಿಯಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ. ಪ್ರತಿದಿನ ಬೆಳಗ್ಗೆ ನಡೆಯುವ ಕ್ರಿಸ್ಮಸ್ ತಿಂಗಳ ವಿಶೇಷ ಪೂಜೆಗೆ ಚರ್ಚ್ಗೆ ಹಾಜರಾಗುತ್ತಾರೆ.
‘ಸ್ವಯಂ ಪ್ರೇರಿತ ಉಪವಾಸವನ್ನು ಚರ್ಚ್ ಪ್ರೋತ್ಸಾಹಿಸುತ್ತದೆ. ಉಳ್ಳವರು ಇಲ್ಲದವರ ಜತೆಗೆ ಹಂಚಿಕೊಳ್ಳುವ ಮತ್ತು ಸಮಾಜದಲ್ಲಿ ಸಹಬಾಳ್ವೆಯನ್ನು ಇದು ಪ್ರೋತ್ಸಾಹಿಸುತ್ತದೆ. ಕಷ್ಟದಲ್ಲಿರುವವರಿಗೆ ನೆರವು ನೀಡಲು, ಮತ್ತೊಬ್ಬರಿಗೆ ದಯೆ, ಕರುಣೆ ತೋರಿಸಲು, ದಾನ ಮಾಡಲು ಕ್ರಿಸ್ಮಸ್ ಪ್ರೇರಕ ಶಕ್ತಿಯಾಗಲಿ’ ಎನ್ನುತ್ತಾರೆ ಉಜಿರೆಯ ಸೇಂಟ್ ಜಾರ್ಜ್ ಚರ್ಚ್ನ ಫಾ. ಜಾರ್ಜ್.
ಮನೆಯ ಮುಂದೆ ತೂಗು ಹಾಕಿದ ನಕ್ಷತ್ರವು ಯೇಸು ಕ್ರಿಸ್ತನ ಜನನ ಸಂಭ್ರಮವನ್ನು ಸೂಚಿಸುತ್ತದೆ ಮತ್ತೊಬ್ಬರ ಬದುಕಿನಲ್ಲಿ ಬೆಳಕು ಹರಡಲು ಕ್ರಿಸ್ಮಸ್ ಶಕ್ತಿ ನೀಡಲಿಮಾ. ಲಾರೆನ್ಸ್ ಮುಕ್ಕುಯಿ ಧರ್ಮಾಧ್ಯಕ್ಷರು ಬೆಳ್ತಂಗಡಿ ಧರ್ಮಪ್ರಾಂತ್ಯ
ಡಿಸೆಂಬರ್ ಎರಡನೆಯ ವಾರದಿಂದ ಕುಸ್ವಾರ್ ತಯಾರಿಕೆ ಆರಂಭವಾಗುತ್ತದೆ. ಇದರಲ್ಲಿ ಕುಟುಂಬದ ಎಲ್ಲ ಸದಸ್ಯರು ಜತೆಗೂಡುತ್ತಾರೆ. ಕುಟುಂಬದ ಪ್ರೀತಿ ಮತ್ತು ಐಕ್ಯತೆಯ ಸಂಕೇತ ಇದು– ಸ್ಟೆಲ್ಲಾ ಡಿಸೋಜ ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.