ನರಸಿಂಹರಾಜಪುರ(ಚಿಕ್ಕಮಗಳೂರು): ಭದ್ರಾ ಜಲಾಶಯದ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಶಿವಮೊಗ್ಗದ ಮೂವರು ಪ್ರವಾಸಿಗರು ಮೃತಪಟ್ಟಿದ್ದಾರೆ.
ಶಿವಮೊಗ್ಗದ ವಿದ್ಯಾನಗರ ಬಡಾವಣೆಯ ಅಫ್ದಾಖಾನ್(23), ಆದಿಲ್(19) ಮತ್ತು ಸಾಜೀದ್(24) ಮೃತಪಟ್ಟ ಯುವಕರು. ಮಾರಿದಿಬ್ಬ ಬಳಿಯಿಂದ ಹಿನ್ನೀರಿನ ವಿಹಂಗಮ ನೋಟ ಸವಿಯಲು ನಾಲ್ವರು ಯುವಕರು ಒಟ್ಟಿಗೆ ಬಂದಿದ್ದರು. ಇವರ ಪೈಕಿ ಒಬ್ಬರಿಗೆ ದೂರವಾಣಿ ಕರೆ ಬಂದಿದ್ದರಿಂದ ಮಾತನಾಡುತ್ತಿದ್ದರು. ಉಳಿದ ಮೂವರು ಬದಿಯಲ್ಲಿದ್ದ ತೆಪ್ಪ ತೆಗೆದುಕೊಂಡು ಹಿನ್ನೀರಿನೊಳಗೆ ಸ್ವಲ್ಪ ದೂರ ತೆರಳಿದ್ದಾರೆ. ಚಾಲನೆ ಗೊತ್ತಿಲ್ಲದಿದ್ದರಿಂದ ನಿಯಂತ್ರಣ ತಪ್ಪಿ ತೆಪ್ಪ ಪಲ್ಟಿ, ಮೂವರು ನೀರಿನಲ್ಲಿ ಮುಳುಗಿದ್ದಾರೆ.
'ಪ್ರಾಥಮಿಕ ಮಾಹಿತಿ ಪ್ರಕಾರ ತೆಪ್ಪ ಮಾಲೀಕ ಕೂಡ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಮೃತದೇಹಗಳ ಪತ್ತೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಶವ ದೊರೆತ ಬಳಿಕ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.