ADVERTISEMENT

ಶೃಂಗೇರಿ | ಭೂ ಪರಿವರ್ತನೆ: ಅರ್ಜಿ ತಿರಸ್ಕಾರ ನಿರಂತರ

ಸ್ವಂತ ಜಮೀನಿಗೂ ಅರಣ್ಯ ಇಲಾಖೆ ಅನುಮತಿ: ಮಲೆನಾಡಿನ ಜೀವನ ಆತಂತ್ರ

ರಾಘವೇಂದ್ರ ಕೆ.ಎನ್
Published 27 ಅಕ್ಟೋಬರ್ 2024, 5:30 IST
Last Updated 27 ಅಕ್ಟೋಬರ್ 2024, 5:30 IST
ಶೃಂಗೇರಿ ತಾಲ್ಲೂಕಿನ ಕೆಳಕೊಪ್ಪ ಗ್ರಾಮದ ರೈತರೊಬ್ಬರು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಕೋರಿ ಸಲ್ಲಿಸಿದ ಅರ್ಜಿಯನ್ನು ಅರಣ್ಯ ಇಲಾಖೆ ತಿರಸ್ಕರಿಸಿರುವುದು
ಶೃಂಗೇರಿ ತಾಲ್ಲೂಕಿನ ಕೆಳಕೊಪ್ಪ ಗ್ರಾಮದ ರೈತರೊಬ್ಬರು ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಕೋರಿ ಸಲ್ಲಿಸಿದ ಅರ್ಜಿಯನ್ನು ಅರಣ್ಯ ಇಲಾಖೆ ತಿರಸ್ಕರಿಸಿರುವುದು   

ಶೃಂಗೇರಿ: ತಮ್ಮ ತೋಟಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲೂ ಸಾಧ್ಯವಾಗದ ಸ್ಥಿತಿ ಮಲೆನಾಡಿನ ಜನರಿಗೆ ಬಂದೊದಗಿದೆ. ಭೂಪರಿವರ್ತನೆ ಕೋರಿ ಸಲ್ಲಿಕೆಯಾದ ಅರ್ಜಿಗಳು ತಿರಸ್ಕಾರವಾಗುತ್ತಿದ್ದು, ಮನೆ ನಿರ್ಮಾಣದ ಕನಸು ನನಸಾಗದೇ ಉಳಿಯುತ್ತಿದೆ.

ಕಾಡಿನೊಂದಿಗೇ ಬದುಕಿರುವ ಜನ ಈಗ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ಬಂದಿದ್ದಾರೆ. ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದ ಸಾಕಷ್ಟ ಜನರ ಅರ್ಜಿಗಳು ತಿರಸ್ಕಾರವಾಗುತ್ತಿವೆ.

ಇತ್ತೀಚಿನ ಉದಾಹರಣೆ ಎಂದರೆ ತಾಲ್ಲೂಕಿನ ಕೆಳಕೊಪ್ಪ ಗ್ರಾಮದ ಬಿ.ಎಂ.ಸುಬ್ರಹ್ಮಣ್ಯ ಅವರು ತಮ್ಮ 10 ಗುಂಟೆ ಜಮೀನಿನಲ್ಲಿ(ಸರ್ವೆ ನಂಬರ್ 98/2) ಎರಡು ಗುಂಟೆಯಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಅದಕ್ಕಾಗಿ ಭೂಪರಿವರ್ತನೆ ಕೋರಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಎಲ್ಲಾ ಭೂಪರಿವರ್ತನೆ ಅರ್ಜಿಗಳನ್ನೂ ಅರಣ್ಯ ಇಲಾಖೆಗೆ ಕಳುಹಿಸಿ ಒಪ್ಪಿಗೆ ಕೇಳಲಾಗುತ್ತಿದೆ. ಅರಣ್ಯ ಇಲಾಖೆ ಒಪ್ಪಿಗೆ ನೀಡದ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತಿದೆ. ಅದೇ ರೀತಿ ಅರಣ್ಯ ಇಲಾಖೆ ಅಭಿಪ್ರಾಯ ಆಧರಿಸಿ ಸುಬ್ರಹ್ಮಣ್ಯ ಅವರ ಅರ್ಜಿ ತಿರಸ್ಕರಿಸಲಾಗಿದೆ. ಈ ಕುರಿತು ಕಂದಾಯ ಇಲಾಖೆಯಿಂದ ಸುಬ್ರಹ್ಮಣ್ಯ ಅವರಿಗೆ ಹಿಂಬರಹ ಬಂದಿದೆ.

ADVERTISEMENT

‘ಅರಣ್ಯ ಇಲಾಖೆಗೂ ಹಿಡುವಳಿ ಜಮೀನಿಗೂ ಸಂಬಂಧ ಇಲ್ಲದಿದ್ದರೂ ಅನುಮತಿ ಕೋರಲಾಗುತ್ತಿದೆ. ಖಾಸಗಿ ಜಮೀನಿಗೆ ಸಂಬಂಧಿಸಿದ ಭೂಪರಿವರ್ತನೆ ಅರ್ಜಿಗಳನ್ನು ಅರಣ್ಯ ಇಲಾಖೆ ತಿರಸ್ಕಾರ ಮಾಡುತ್ತಿರುವುದು ಏಕೆ’ ಎಂಬುದು ಸ್ಥಳೀಯರ ಪ್ರಶ್ನೆ.

‘ಅರಣ್ಯ ಇಲಾಖೆ ತಮಗೆ ಸಂಬಂಧ ಇಲ್ಲದ ಜಾಗಕ್ಕೂ ಮೂಗು ತೂರಿಸುತ್ತಿದೆ. ಮಲೆನಾಡಿನಲ್ಲಿ ತಲತಲಾಂತರದಿಂದ ಜೀವನ ನಡೆಸಿರುವ ಜನರ ಬದುಕುವ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂಬುದು ಮಲೆನಾಡಿಗರ ಆಕ್ರೋಶ.

ಸಣ್ಣ ಮನೆ, ದನ ಕರು ಸಾಕಲು ಕೊಟ್ಟಿಗೆ, ಸೌದೆ ಸಂಗ್ರಹ ಹಾಗೂ ಹುಲ್ಲು ಸಂಗ್ರಹಿಸಿಡಲು ಸಣ್ಣ ಕೊಟ್ಟಿಗೆ ಇವೆ. ಆದರೆ, ಈ ರೀತಿ ಮನೆಗಳಿಗೆ ಯಾವುದೇ ರೀತಿಯ ಹಕ್ಕುಪತ್ರವಿಲ್ಲ. ಸರ್ಕಾರ ಸಮಸ್ಯೆ ಬಗೆಹರಿಸಲು ಭೂಕಂದಾಯ ಕಾಯ್ದೆಗೆ ಈ ಹಿಂದೆ ತಿದ್ದುಪಡಿ ತಂದಿದ್ದರೂ, ಅರಣ್ಯ ಇಲಾಖೆ ಮಾತ್ರ ವಿನಾ ಕಾರಣ ರೈತರಿಗೆ ಕಿರುಕುಳ ನೀಡುವುದು ಮಾಮೂಲಿಯಾಗಿದೆ. ಸರ್ಕಾರ ಮಲೆನಾಡಿನ ನಾಗರಿಕ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂಬುದು ನಾಗರಿಕರ ಒತ್ತಾಯ.

ರೈತರು ತಮ್ಮ ಹಿಡುವಳಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡರೆ ಅರಣ್ಯ ಇಲಾಖೆ ಏಕೆ ತಕರಾರು ಮಾಡುತ್ತಿದೆ. ರೈತರು ತಮ್ಮ ಸ್ವಂತ ಜಾಗದಲ್ಲಿ ವಸತಿ ನಿರ್ಮಿಸಿಕೊಳ್ಳಲು ಮುಂದಾದರೆ ಇದಕ್ಕೆ ಇಲಾಖೆ ತೊಂದರೆ ನೀಡುವುದು ಎಷ್ಟರ ಮಟ್ಟಿಗೆ ಸರಿ
ಕಾನುವಳ್ಳಿ ಚಂದ್ರಶೇಖರ್ ತಾಲ್ಲೂಕು ರೈತ ಸಂಘದ ಅಧ್ಯಕ್ಷ

ಸಬೂಬು ಸರಿಯಲ್ಲ

ವಸತಿ ಉದ್ದೇಶಕ್ಕೆ ತಮ್ಮ ಸ್ವಂತ ಜಾಗದ ಭೂ ಪರಿವರ್ತನೆ ಕೋರಿ ಅರ್ಜಿ ಸಲ್ಲಿಸಿದರೆ ಇದಕ್ಕೆ ಅರಣ್ಯ ಇಲಾಖೆ ತಕರಾರು ತೆಗೆದಿರುವುದು ಸರಿಯಲ್ಲ. ಯಾವ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅರ್ಜಿ ತಿರಸ್ಕರಿಸಲಾಗಿದೆ ಎಂಬುದನ್ನು ಹಿಂಬರಹದಲ್ಲಿ ತಿಳಿಸಬೇಕು. ರೈತರು ಎಷ್ಟೇ ದಾಖಲೆ ಒದಗಿಸಿದರು ಸೊಪ್ಪಿನ ಬೆಟ್ಟ ಪ್ರಸ್ತಾವಿತ ಅರಣ್ಯ ಮತ್ತು ಪರಿಭಾವಿತ ಅರಣ್ಯ ಎಂದು ಸಬೂಬು ನೀಡಿ ಅರ್ಜಿಗಳನ್ನು ವಜಾ ಮಾಡಲಾಗುತ್ತಿದೆ. ಇದು ಸರಿಯಾದ ಕ್ರಮ ಅಲ್ಲ ಎಂದು ಮಲೆನಾಡು ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ಎಸ್.ನಯನ ಹೇಳಿದರು.

ಎಲ್ಲ ದಾಖಲೆ ಒದಗಿಸಬೇಕು

ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ದೃಢೀಕರಣ ಮಾತ್ರ ನೀಡುತ್ತಿದ್ದಾರೆ. ಇದರ ಆಧಾರದ ಮೇಲೆ ಅಭಿಪ್ರಾಯ ನೀಡುವುದು ಕಷ್ಟ. ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಒದಗಿಸಬೇಕು. ಆಗ ಅದನ್ನು ಪರಿಶೀಲಿಸಿ  ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗೊ ಅಥವಾ ಅಲ್ಲವೊ ಎಂದು ಅಭಿಪ್ರಾಯ ನೀಡುತ್ತೇವೆ ಎಂದು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್. ನಂದೀಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.