ಮೂಡಿಗೆರೆ: ವಿಷಕಾರಿ ಚುಚ್ಚುಮದ್ದು ನೀಡಿ ಪತ್ನಿಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಲ್ಯಾಬ್ ಟೆಕ್ನೀಷಿಯನ್ ದರ್ಶನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ದೇವರುಂದ ಗ್ರಾಮದಲ್ಲಿ ಶ್ವೇತಾ(32) ಸಾವನ್ನಪ್ಪಿದ್ದು, ವಿಷಕಾರಿ ಚುಚ್ಚುಮದ್ದು ನೀಡಿ ಕೊಲೆ ಮಾಡಲಾಗಿದೆ ಎಂದು ಆಕೆಯ ಸಹೋದರ ಸುದರ್ಶನ್ ಗೋಣಿಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೇವರುಂದ ಗ್ರಾಮ ಬಳಿಯ ಅಕ್ಕೆರುದ್ದಿಯ ದರ್ಶನ್ ಮತ್ತು ಕಳಸ ಗ್ರಾಮದ ಖಂಡೋಜಿರಾವ್ ಎಂಬುವವರ ಪುತ್ರಿ ಶ್ವೇತಾ ವಿವಾಹ ಏಳು ವರ್ಷಗಳ ಹಿಂದೆ ನಡೆದಿತ್ತು. ಇಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದರು.ಈ ದಂಪತಿಗೆ ಒಬ್ಬ ಪುತ್ರನಿದ್ದು, ಇತ್ತೀಚೆಗೆ ದೇವರುಂದ ಗ್ರಾಮಕ್ಕೆ ಬಂದಿದ್ದರು.
ಸೋಮವಾರ ರಾತ್ರಿ ಶ್ವೇತಾ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದರ್ಶನ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಮಂಗಳವಾರ ಬೆಳಿಗ್ಗೆ ಕಳಸದಿಂದ ಬಂದ ಶ್ವೇತಾ ಅವರ ಕುಟುಂಬದವರು ಮೃತದೇಹ ಕಂಡು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಲೆ ಆರೋಪ:
‘ದರ್ಶನ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ದರ್ಶನ್ ಅವರಿಗೆ ಬೆಂಗಳೂರಿನಲ್ಲಿ ಬೇರೊಬ್ಬ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಈ ವಿಚಾರ ಅಕ್ಕನಿಗೂ ಗೊತ್ತಾಗಿದ್ದು, ನನಗೂ ತಿಳಿಸಿದ್ದಳು. ಬುದ್ದಿ ಹೇಳಿದ್ದರೂ ವಿವಾಹ ವಿಚ್ಛೇದನ ನೀಡುವಂತೆ ಶೇತಾಗೆ ಕಿರುಕುಳ ನೀಡುತ್ತಿದ್ದರು’ ಎಂದು ಶೇತಾ ಸಹೋದರ ಸುದರ್ಶನ್ ದೂರಿನಲ್ಲಿ ತಿಳಿಸಿದ್ದಾರೆ.
‘ಸೋಮವಾರ ರಾತ್ರಿ ವಿಷದ ಚುಚ್ಚುಮದ್ದು ನೀಡಿ ಕೊಲೆ ಮಾಡಲಾಗಿದೆ. ಹೃದಯಾಘಾತದಿಂದ ಸತ್ತಿರುವುದಾಗಿ ನಂಬಿಸಲು ಯತ್ನಿಸಿದರು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾಗಿದೆ’ ಎಂದು ಸುದರ್ಶನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.