ನರಸಿಂಹರಾಜಪುರ: ಸಾರ್ವಜನಿಕ ಸ್ಥಳದಲ್ಲಿ ಲಾಂಗ್ (ತಲವಾರ್) ಝಳಪಿಸುತ್ತ ಸೆರೆಹಿಡಿದ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಹಾಗೂ ವಾಹನದಲ್ಲಿ ಲಾಂಗ್ ಇರಿಸಿಕೊಂಡು ಸಂಚರಿಸಿದ ಆರೋಪದ ಮೇಲೆ ಯುವಕರಿಬ್ಬರನ್ನು ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ.
ಪಟ್ಟಣದ 6ನೇ ವಾರ್ಡ್ ಬೆಟ್ಟಗೆರೆ ನಿವಾಸಿಗಳಾದ ಮೆಕಾನಿಕ್ ಸೈಯದ್ ಸಲ್ಮಾನ್ (22) ಮತ್ತು ಕಾರ್ಪೆಂಟರ್ ಮಹಮ್ಮದ್ ಸಾದಿಕ್ (25) ಬಂಧಿತರು.
ಇಬ್ಬರು ವ್ಯಕ್ತಿಗಳು ಕಪ್ಪು ಕಾರಿನಲ್ಲಿ ಲಾಂಗ್ ಇರಿಸಿಕೊಂಡು ಹೆದರಿಕೆ ಹುಟ್ಟಿಸುವ ರೀತಿಯಲ್ಲಿ ಶೆಟ್ಟಿಕೊಪ್ಪ ಗ್ರಾಮದ ಕಡೆಯಿಂದ ಬರುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಗುರುದತ್ ಕಾಮತ್ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ಮಾಡಿದ್ದರು. ತಾಲ್ಲೂಕಿನ ಸೌತಿಕೆರೆ ಗ್ರಾಮದ ಬಳಿ ಕಾರನ್ನು ತಡೆದು ಪರಿಶೀಲಿಸಿದಾಗ ಲಾಂಗ್ ಕಂಡುಬಂದಿತ್ತು. ‘ನಮ್ಮನ್ನು ನೋಡಿ ಜನರು ಹೆದರಿಕೊಳ್ಳಬೇಕು ಎಂಬ ಉದ್ದೇಶದಿಂದ ಲಾಂಗ್ ತೋರಿಸುತ್ತ ಓಡಾಡಿದ್ದೆವು’ ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದರು.
ಆಯುಧ ಮತ್ತು ಕಾರು ವಶಪಡಿಸಿಕೊಂಡಿರುವ ಪೊಲೀಸರು ಆಯುಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಯುವರಾಜ್, ದೇವರಾಜ್, ಚೈತ್ರಾ ಪಾಲ್ಗೊಂಡಿದ್ದರು. ಆರೋಪಿಗಳು ತಲವಾರ್ ಹಿಡಿದುಕೊಂಡಿರುವ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.