ಹಿರಿಯೂರು: ಸುಮಾರು 30 ವರ್ಷಗಳಷ್ಟು ಹಳೆಯದಾದ ಅಂಗನವಾಡಿ ಕಟ್ಟಡವೊಂದರ ಒಳಗೆ ಮಂಗಳವಾರ ರಾತ್ರಿ ಸುರಿದ ಮಳೆಗೆ ನೀರು ಭರ್ತಿಯಾಗಿದ್ದು, ಕಟ್ಟಡ ಕುಸಿಯುವ ಭೀತಿಯಿಂದ ಅಂಗನವಾಡಿ ಸಿಬ್ಬಂದಿ ಪುಟಾಣಿ ಮಕ್ಕಳನ್ನು ಬಯಲಲ್ಲಿ ಕೂರಿಸಿರುವ ಘಟನೆ ಹಿರಿಯೂರು ನಗರಕ್ಕೆ ಕೇವಲ 2 ಕಿ.ಮೀ. ದೂರದಲ್ಲಿರುವ ಲಕ್ಕವ್ವನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಅಂಗನವಾಡಿಗೆ ನೂತನ ಕಟ್ಟಡ ನಿರ್ಮಿಸಿ ಕೊಡಬೇಕೆಂದು ಪೋಷಕರು ಐದಾರು ವರ್ಷದಿಂದ ಒತ್ತಾಯ ಮಾಡುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ. ಸ್ವಲ್ಪ ಮಳೆ ಬಂದರೂ ಕೇಂದ್ರದ ಒಳಗೆ ನೀರು ನುಗ್ಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ನೀರಿದ್ದರೆ, ಅಂಗನವಾಡಿ ಸಿಬ್ಬಂದಿ ಮೊಗೆದು ಹಾಕುತ್ತಾರೆ. ಆದರೆ, ಮಂಗಳವಾರ ರಾತ್ರಿ ಬಿದ್ದ ಮಳೆಗೆ ಒಂದು ಅಡಿಯಷ್ಟು ನೀರು ನಿಂತಿದೆ. ಅಲ್ಲದೆ, ಕಟ್ಟಡದ ಗೋಡೆ ಮಳೆಗೆ ನೆನೆದಿರುವ ಕಾರಣ ಕುಸಿದು ಬೀಳಬಹುದು ಎಂಬ ಭಯ ಸಿಬ್ಬಂದಿಯನ್ನು ಕಾಡುತ್ತಿದೆ ಎಂದು ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್.ಗಿರಿಧರ್ ತಿಳಿಸಿದ್ದಾರೆ.
ಒತ್ತಾಯ: ನೂತನ ಕಟ್ಟಡ ನಿರ್ಮಿಸುವವರೆಗೆ ಕೇಂದ್ರವನ್ನು ಯಾವುದಾದರೂ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ತಕ್ಷಣವೇ ನೂತನ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರು, ಪೋಷಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.