ಧರ್ಮಪುರ (ಚಿತ್ರದುರ್ಗ): ಮದುವೆ ಮಾಡಲಿಲ್ಲ ಎಂದು ಕೋಪಗೊಂಡು ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಸಮೀಪದ ಕುಂದಲಗುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಗ್ರಾಮದ ರಂಗಸ್ವಾಮಿ (50) ಕೊಲೆಯಾದವರು. ಅವರ ಮಗ ದೇವರಾಜನ (30) ವಿರುದ್ಧ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ರಾತ್ರಿ ಊಟದ ವೇಳೆ ತನಗೆ ಮೊಟ್ಟೆ ಕೊಡಲಿಲ್ಲ ಎಂದು ದೇವರಾಜ, ತಂದೆ ಜೊತೆ ಜಗಳವಾಡಿದ್ದ. ಆಗ ಪರಸ್ಪರರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಈ ವೇಳೆ ಕುಪಿತಗೊಂಡ ಆರೋಪಿ, ‘ಎಲ್ಲ ವಿಚಾರದಲ್ಲೂ ನನ್ನನ್ನು ಕಡೆಗಣಿಸುತ್ತಿದ್ದೀಯಾ. ಮದುವೆಯನ್ನೂ ಮಾಡಿಸುತ್ತಿಲ್ಲಾ’ ಎಂದು ಹೇಳಿ ಹಲ್ಲೆ ನಡೆಸಿದ್ದಾನೆ.
‘ಆರೋಪಿಯು ಸಿಟ್ಟಿನಲ್ಲಿ ತಂದೆಯ ಎದೆ ಮತ್ತು ಕುತ್ತಿಗೆಯ ಮೇಲೆ ಕಾಲಿಟ್ಟು, ಬಲವಾಗಿ ತುಳಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.