ಹಿರಿಯೂರು: ನಗರದ ಬೈಪಾಸ್ ರಸ್ತೆಯಲ್ಲಿರುವ ವಿಎಂಪಿ ಮಹಲ್ ಹೋಟೆಲ್ ಆವರಣದಲ್ಲಿ ಜ. 16ರಂದು ಹೊಳಲ್ಕೆರೆಯ ಅರುಣ್ ಕುಮಾರ್ ಅವರ ಮೇಲೆ ಆಸಿಡ್ ದಾಳಿ ಮಾಡಿದ್ದ ಆರೋಪಿಗಳನ್ನು ಮಂಗಳವಾರ ಡಿವೈಎಸ್ಪಿ ಚೈತ್ರಾ ನೇತೃತ್ವದ ತಂಡ ಬಂಧಿಸಿದೆ.
ಬೆಂಗಳೂರಿನ ವಿಪ್ರೊ ಕಂಪನಿಯಲ್ಲಿ ಉತ್ಪಾದನಾ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವ ಟಿ.ಎಸ್.ಪ್ರಜ್ವಲ್, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಮುಗ್ಗೊಂಡನಹಳ್ಳಿಯ ಪ್ಲಂಬರ್ ಕೆಲಸದ ನಿತಿನ್ ಕುಮಾರ್ ಹಾಗೂ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದ ಬೈಕ್ ಮೆಕ್ಯಾನಿಕ್ ಆರ್. ಗಿರೀಶ್ ಬಂಧಿತ ಆರೋಪಿಗಳು.
ಜ. 16ರಂದು ಬೆಂಗಳೂರಿಗೆ ಬಸ್ನಲ್ಲಿ ಹೊರಟಿದ್ದ ಅರುಣ್ ಕುಮಾರ್ ಮೇಲೆ ಬೈಕ್ನಲ್ಲಿ ಬಂದಿದ್ದ ಇಬ್ಬರು ಯುವಕರು ಮುಖಕ್ಕೆ ಆಸಿಡ್ ಎರಚಿ ಪರಾರಿಯಾಗಿದ್ದರು. ಈ ಕುರಿತು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಿವೈಎಸ್ಪಿ ಚೈತ್ರಾ ನೇತೃತ್ವದಲ್ಲಿ ನಗರಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಖಾಂಡಿಕೆ, ಎಸ್ಐಗಳಾದ ಮಂಜುನಾಥ್ ಮತ್ತು ಲಕ್ಷ್ಮೀನಾರಾಯಣ ನೇತೃತ್ವದ ತಂಡವನ್ನು ರಚಿಸಿದ್ದರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.