ಮೊಳಕಾಲ್ಮುರು: ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸುವ ಕಾರ್ಯಕ್ಕೆ ರಾಜಕೀಯ ಬಣ್ಣವನ್ನು ಬಳಿಯಲಾಗುತ್ತಿದೆ ಎಂದು ರಾಜ್ಯ ರೈತಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆರೋಪಿಸಿದರು.
ನುಂಕಿಮಲೆ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
‘ಯೋಜನೆ ಅನುಷ್ಠಾನ ವಿಚಾರ, ಅನುದಾನ ಮಂಜೂರು ಸಂಗತಿ ಸೇರಿ ಪ್ರತಿಯೊಂದು ಅಂಶವನ್ನೂ ರಾಜಕೀಯ ಮುಖಂಡರು ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಜಾರಿ ಮಾಡಲಾಯಿತು, ನಮ್ಮ ಸರ್ಕಾರವೇ ಮೊದಲು ಅನುದಾನ ನೀಡಿತು ಎಂಬ ವಿಷಯವನ್ನು ಮುಂದಿಟ್ಟು ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯೋಜನೆ ವಾಸ್ತವ ಸ್ಥಿತಿಗತಿ ಮತ್ತು ಆಗಬೇಕಿರುವ ಕಾರ್ಯಕ್ರಮ, ಅದಕ್ಕಿರುವ ಮಾರ್ಗಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಪರಿಣಾಮ ರೈತರು ನೀರಾವರಿ ಆಸೆಯನ್ನು ಮರೆಯುತ್ತಿದ್ದಾರೆ’ ಎಂದು ದೂರಿದರು.
‘ಜಿಲ್ಲೆಯಲ್ಲಿ ಸಾಕಷ್ಟು ಮಠಗಳಿದ್ದು, ಮಠಾಧೀಶರು ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಕೈಜೋಡಿಸಬೇಕು. ಇದರಿಂದ ಸರ್ಕಾರ ಗಮನಹರಿಸಲು ಸಾಧ್ಯವಾಗಲಿದೆ. ಸ್ವಾಮೀಜಿಗಳು ನೇತೃತ್ವ ವಹಿಸಿಕೊಂಡಲ್ಲಿ ಸರ್ಕಾರಗಳು ಸ್ಪಂದಿಸಲಿವೆ ಎನ್ನುವುದಕ್ಕೆ ಸಿರಿಗೆರೆ ತರಳಬಾಳು ಶ್ರೀಗಳ ನೇತೃತ್ವದ ಏತ ನೀರಾವರಿ ಯೋಜನೆ ಸಾಕ್ಷಿಯಾಗಿದೆ. ಇದನ್ನು ಜಿಲ್ಲಾ ನೀರಾವರಿ ಹೋರಾಟ ಸಮಿತಿಗೆ ಮನವಿ ಮಾಡಲಾಗುವುದು. ರಾಮಮಂದಿರ ಲೋಕಾರ್ಪಣೆ ವಿಜಯೋತ್ಸವ ಮಾದರಿಯಲ್ಲಿ ಪ್ರತಿ ಮನೆಯಲ್ಲೂ ಭದ್ರಾಮೇಲ್ದಂಡೆ ಯೋಜನೆ ಹೋರಾಟ ಆರಂಭವಾಗಬೇಕಿದೆ’ ಎಂದು ಬಸವರೆಡ್ಡಿ ಹೇಳಿದರು.
ಸಂಘದ ತಾಲ್ಲೂಕು ಅಧ್ಯಕ್ಷ ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಪ್ರಗತಿಪರ ರೈತ ರಾವಲಕುಂಟೆಯ ರಮೇಶ್ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಮುಖಂಡರಾದ ತಿಪ್ಪೀರಯ್ಯನಹಟ್ಟಿ ಚಂದ್ರಣ್ಣ, ನಾಗರಾಜ್, ಡಿ.ಬಿ. ಕೃಷ್ಣಮೂರ್ತಿ, ಡಿ.ಚಂದ್ರಶೇಖರ ನಾಯಕ, ಹನುಮಂತಪ್ಪ, ಕೆ.ಚಂದ್ರಣ್ಣ, ಎನ್.ಈಶ್ವರರೆಡ್ಡಿ, ಮೇಸ್ತ್ರಿ ಪಾಪಯ್ಯ, ಕನಕ ಶಿವಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.